ಗೋಕರ್ಣ : ಶ್ರೀ ಕ್ಷೇತ್ರ ಗೋಕರ್ಣದ 'ಆಂಜನೇಯ ಜನ್ಮಭೂಮಿ'ಯ ಪುಣ್ಯಪರಿಸರದಲ್ಲಿ ಹನುಮ ಜಯಂತಿ ಪ್ರಯುಕ್ತ ಪಲ್ಲಕ್ಕಿ ಉತ್ಸವ , ಚತುರ್ವೇದ ಪಾರಾಯಣ,ರುದ್ರ ಹವನ,ಹನುಮಾನ್ ಮೂಲಮಂತ್ರ ಹವನ , ಪವಮಾನ ಹವನ ಮುಂತಾದ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನವಾದವು.
ಮಧ್ಯಾಹ್ನ ಎಂ ಟಿ ಭಾಗ್ವತ್ ಉಡುಪಿ ಹಾಗು ತಂಡದವರಿಂದ ಭಜನೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೆರಿದವು. ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾಗ್ಯಶಾಲಿಗಳಾದರು.
ಆಂಜನೇಯ ಜನ್ಮಭೂಮಿ
ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಅವರು ತಮ್ಮ ಸಂನ್ಯಾಸ ದೀಕ್ಷ್ಯೆಯ ದಿನದಿಂದ ಆರಂಭಿಸಿ ಪ್ರತಿದಿನ ಶ್ರೀ ವಾಲ್ಮೀಕಿ ರಾಮಾಯಣವನ್ನು ಪಾರಾಯಣ ಮಾಡುತ್ತಿದ್ದು, ವಾಲ್ಮೀಕಿ ರಾಮಾಯಣದ ಸುಂದರಕಾಂಡದಲ್ಲಿನ 35ನೇ ಸರ್ಗದಲ್ಲಿ ಆಂಜನೇಯನು ಸೀತಾಮಾತೆಗೆ ತನ್ನ ಪರಿಚಯವನ್ನು ಹೇಳುವಾಗ, ತಾನು ಗೋಕರ್ಣದವನು ಎಂಬುದಾಗಿ ಉಲ್ಲೇಖಿಸುವ ಶ್ಲೋಕಗಳನ್ನು ಆಧರಿಸಿ, ಜ್ಯೋತಿಷ್ಯಾಸ್ತ್ರ ಹಾಗು ಸ್ಥಳೀಯ ಮಾಹಿತಿಗಳನ್ನು ಅಭ್ಯಸಿಸಿ ಪೌರಾಣಿಕವಾದ ಶ್ರೀ ಆಂಜನೇಯ ಜನ್ಮಸ್ಥಳವನ್ನು ಶ್ರೀಗಳು ಅನ್ವೇಷಿಸಿದರು.
ಶ್ರೀ ಆಂಜನೇಯ ಜನ್ಮಭೂಮಿಯು ಗೋಕರ್ಣದ ಕಡಲತಿರದಲ್ಲಿರುವ ಕೇಸರಿವನದಲ್ಲಿದ್ದು, ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ದಿವ್ಯ ಮಾರ್ಗದರ್ಶನದಲ್ಲಿ ಕಳೆದ 7 ವರ್ಷಗಳಿಂದ ಪ್ರತಿದಿನ ಪೂಜೆ ನಡೆಯುತ್ತಲಿದ್ದು, ಹಗಲಿರುಳೆನ್ನದೆ ಅಖಂಡವಾಗಿ ರಾಮತಾರಕ ಜಪ ನೆಡೆಯುತ್ತಿರುವುದು ಇಲ್ಲಿನ ವಿಶೇಷತೆಯಾಗಿದೆ. ಪೂಜ್ಯ ಶ್ರೀಗಳ ಮಾರ್ಗದರ್ಶನದಲ್ಲಿ ಆಂಜನೇಯ ಜನಿಸಿದ ಈ ಪೌರಾಣಿಕ ಸ್ಥಳದ ಸಮಗ್ರ ಅಭಿವೃದ್ಧಿಗೆ ಯೋಜಿಸಲಾಗಿದ್ದು, ಕಾರ್ಯಗತವಾಗುತ್ತಲಿವೆ.