ನವದೆಹಲಿ : ಪಠಾಣ್ ಕೋಟ್ ಮೇಲಿನ ದಾಳಿ ಪ್ರಕರಣದ ರೂವಾರಿ, ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ನನ್ನು ವಿಶ್ವಸಂಸ್ಥೆಯ ನಿಷೇಧಿತ ಉಗ್ರರ ಪಟ್ಟಿಗೆ
ಸೇರಿಸುವ ಯತ್ನಕ್ಕೆ ಅಡ್ಡಿಪಡಿಸಿದ ಚೀನಾಕ್ಕೆ ಭಾರತ ತಿರುಗೇಟು ನೀಡಿದೆ. ಚೀನಾ ಭಯೋತ್ಪಾದಕ ಎಂದು ಘೋಷಿಸಿರುವ ದೋಲ್ಕುನ್ ಗೆ ಭಾರತ ಪ್ರವೇಶಕ್ಕೆ ಅನುಮೋದನೆ ನೀಡಿದೆ.
ಹಿಮಾಚಲಪ್ರದೇಶದ ಧರ್ಮಶಾಲಾದಲ್ಲಿರುವ ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರನ್ನು ಮಾಸಾಂತ್ಯದಲ್ಲಿ ಭೇಟಿ ಮಾಡಲು ವಿಶ್ವ ಉಯಿಗುರ್ ಕಾಂಗ್ರೆಸ್ ನ ನಾಯಕ ದೋಲ್ಕುನ್ ಇಸಾಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಪ್ರಜಾಪ್ರಭುತ್ವ ಹಾಗೂ ಚೀನಾ ಕುರಿತ ಸಮ್ಮೇಳನದಲ್ಲೂ ದೋಲ್ಕುನ್ ಇಸಾ ಭಾಗವಹಿಸಲಿದ್ದಾರೆ.
ಭಾರತದ ನಿರ್ಧಾರದ ಬಗ್ಗೆ ತಮಗೆ ಗೊತ್ತಿಲ್ಲ. ಆದರೆ ದೋಲ್ಕುನ್ ಒಬ್ಬ ಭಯೋತ್ಪಾದಕ. ಆತನ ವಿರುದ್ಧ ಚೀನಾ ಪೊಲೀಸರು ಹಾಗೂ ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಹೊರಡಿಸಿವೆ. ಆತನನ್ನು ನ್ಯಾಯದ ಮುಂದೆ ನಿಲ್ಲಿಸುವ ಬದ್ಧತೆ ಎಲ್ಲ ರಾಷ್ಟ್ರಗಳಿಗೂ ಇರಬೇಕಾಗುತ್ತದೆ ಎಂದು ಚೀನಾದ ವಿದೇಶಾಂಗ ವಕ್ತಾರ ಹುವಾ ಚುನ್ಯಿಂಗ್ ತಿಳಿಸಿದ್ದಾರೆ.