ನವದೆಹಲಿ : ಸಂಸತ್ ನ ಬಜೆಟ್ ಅಧಿವೇಶನದ ಮುಂದುವರಿದ ಭಾಗ ಏ.25ರಿಂದ ಆರಂಭವಾಗಲಿದ್ದು, ಸರಕು ಹಾಗೂ ಸೇವಾ ತೆರಿಗೆ(ಜಿ.ಎಸ್.ಟಿ) ಮಸೂದೆ ಸೇರಿ ಕೇಂದ್ರ ಸರ್ಕಾರದ ಹಲವು ಮಹತ್ವದ ಮಸೂದೆಗಳ ಅಂಗೀಕಾರ ಮತ್ತೆ ನನೆಗುದಿಗೆ ಬೀಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಸರ್ಕಾರ ಮಹತ್ವದ ಜಿ.ಎಸ್.ಟಿ ಸೇರಿದಂತೆ 13 ಮಸೂದೆಗಳನ್ನು ಲೋಕಸಭೆಯಲ್ಲಿ ಮತ್ತು 11 ಮಸೂದೆಗಳನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಿಕೊಳ್ಳುವ ಉದ್ದೇಶ ಹೊಂದಿದೆ. ಆದರೆ, ಕಾಂಗ್ರೆಸ್, ಜೆಡಿಯು ಮತ್ತು ಎಡರಂಗ ಸೇರಿದಂತೆ ಪ್ರಮುಖ ವಿಪಕ್ಷಗಳು ಉತ್ತರಾಖಂಡದಲ್ಲಿ ಕಾಂಗ್ರೆಸ್ ಸರಕಾರವನ್ನು ಉದ್ದೇಶಪೂರ್ವಕವಾಗಿ ವಜಾಗೊಳಿಸಲಾಗಿದ್ದು, ಈ ಬಗ್ಗೆ ಚರ್ಚೆ ನಡೆಯಬೇಕು ಎಂದು ಆಗ್ರಹಿಸಿ ಮೊದಲ ದಿನದಿಂದಲೇ ಗದ್ದಲ ಎಬ್ಬಿಸುವ ಸಾಧ್ಯತೆ ಇದೆ.
ಆದರೆ ಸರ್ಕಾರ ಕೂಡ ಈ ವಿಚಾರದಲ್ಲಿ ತಿರುಗೇಟು ನೀಡಲು ಸಿದ್ಧವಾಗಿದೆ ಎಂದು ಮೂಲಗಳು ಹೇಳಿವೆ. ಈ ವರೆಗೆ ದೇಶದಲ್ಲಿ 111 ಬಾರಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಲಾಗಿದೆ. ಇದರಲ್ಲಿ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರವೇ 91 ಬಾರಿ ಈ ಆಡಳಿತ ಹೇರಿದೆ ಎಂಬ ಅಂಕಿ ಅಂಶವನ್ನು ಬಲವಾಗಿ ಮಂಡಿಸಲಿದೆ ಎಂದು ಹೇಳಲಾಗುತ್ತಿದೆ.
ಒಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತು ವಿಪಕ್ಷಗಳ ಮಧ್ಯೆ ಉತ್ತರಾಖಂಡ್ ರಾಷ್ಟ್ರಪತಿ ಆಳ್ವಿಕೆ ಹೇರಿಕೆ ವಿವಾದ ಭಾರೀ ಕೋಲಾಹಲವೆಬ್ಬಿಸುವ ಸಾಧ್ಯತೆ ಇದೆ.
ಇನ್ನು ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಕಲಾಪಕ್ಕೆ ಹಾಜರಾತಿ ಕೊರತೆ ಎದುರಾಗುವ ಸಾಧ್ಯತೆ ಇದೆ. ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆ, ದೇಶಾದ್ಯಂತ ಉಂಟಾಗಿರುವ ಬರ ಪರಿಸ್ಥಿತಿ, ಇಶ್ರತ್ ಜಹಾನ್ ಎನ್ ಕೌಂಟರ್ ಪ್ರಕರಣದ ಅಫಿಡವಿಟ್ ತಿದ್ದುಪಡಿ ವಿಚಾರ, ಇ.ಪಿ.ಎಫ್.ಒ ನೀತಿ ಮೊದಲಾದವು ಚರ್ಚೆಯ ವಿಷಯಗಳಾಗಿವೆ.