ನವದೆಹಲಿ : ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಮುಕ್ತಾಯಗೊಂಡಿದ್ದು, ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದೆ.
ತಮಿಳುನಾಡಲ್ಲಿ ಆಡಳಿತ ವಿರೋಧಿ ಅಲೆಯಿಂದ ಮುಖ್ಯಮಂತ್ರಿ ಜೆ.ಜಯಲಲಿತಾ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಇದೆ. ಈ ಭಾರಿ ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ.
ಕೇರಳದಲ್ಲಿ ಸಿಪಿಎಂ ನೇತೃತ್ವದ ಎಡರಂಗಕ್ಕೆ ಅಧಿಕಾರ ಸಿಗುವ ಸಾಧ್ಯತೆ ಇದೆ.ಒಟ್ಟು 140 ಸದಸ್ಯ ಬಲದ ಕೇರಳ ವಿಧಾನಸಭೆಯಲ್ಲಿ ಎಲ್ ಡಿಎಫ್ ಗೆ 78 ಸ್ಥಾನ, ಯುಡಿಎಫ್ ಗೆ 58 ಸ್ಥಾನ, ಎನ್ ಡಿಎಗೆ 2 ಹಾಗೂ ಇತರರಿಗೆ ಎರಡು ಸ್ಥಾನ ದೊರೆಯಲಿವೆ.
ಸಮೀಕ್ಷೆಗಳ ಪ್ರಕಾರ ಅಸ್ಸಾಂನಲ್ಲಿ ಬಿಜೆಪಿ - ಎಜಿಪಿ ಮೈತ್ರಿಕೂಟ ಸರಕಾರ ರಚಿಸುವ ನಿರೀಕ್ಷೆ ಇದೆ. ಪಶ್ಚಿಮ ಬಂಗಾಲದಲ್ಲಿ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಸರಕಾರ ಮತ್ತೆ ಗದ್ದುಗೆಗೆ ಏರುವುದು ನಿಚ್ಚಳವಿದೆ. ಆದರೆ ಕಾಂಗ್ರೆಸ್ ಪಕ್ಷ ನಿರ್ಗಮನದ ಮಾರ್ಗದಲ್ಲಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ.
ಸಮೀಕ್ಷಾ ವಿವರಗಳು ಹೀಗಿವೆ:
ನ್ಯೂಸ್ ನೇಶನ್ ಪ್ರಕಾರ ತಮಿಳುನಾಡಿನಲ್ಲಿ ಎಐಎಡಿಎಂಕೆ : 95 - 99, ಡಿಎಂಕೆ 114 - 118, ಪಿ ಡಬ್ಲ್ಯು ಎಫ್ 12 - 16, ಬಿಜೆಪಿ 0 - 1, ಇತರರು 5 - 9 ಸ್ಥಾನಗಳನ್ನು ಪಡೆಯಲಿವೆ.
ಟೈಮ್ಸ್ ನೌ - ಸಿ ವೋಟರ್ ಪ್ರಕಾರ ಅಸ್ಸಾಂನಲ್ಲಿ ಕಾಂಗ್ರೆಸ್ 41, ಬಿಜೆಪಿ + 57, ಎಐಯುಡಿಎಫ್ 18, ಇತರರು 10 ಸ್ಥಾನಗಳನ್ನು ಪಡೆಯಲಿವೆ.
ಎಬಿಪಿ ಆನಂದ ಪ್ರಕಾರ ಪಶ್ಚಿಮ ಬಂಗಾಲದಲ್ಲಿ ಟಿಎಂಸಿ 178, ಎಡ - ಕಾಂಗ್ರೆಸ್ 110, ಬಿಜೆಪಿ 1, ಇತರರು 5 ಸ್ಥಾನಗಳನ್ನು ಗಳಿಸಲಿವೆ.
ಇಂಡಿಯಾ ಟುಡೇ - ಎಕ್ಸಿಸ್ ಮೈ ಇಂಡಿಯಾ ಪೋಲ್ಸ್ ಪ್ರಕಾರ ಟಿಎಂಸಿ 233 - 253 ಸೀಟುಗಳನ್ನು ಹಾಗೂ ಟೈಮ್ಸ್ ನೌ - ಸೀ ವೋಟರ್ ಪ್ರಕಾರ ಟಿಎಂಸಿ 167, ಸಿಪಿಎಂ +75, ಕಾಂಗ್ರೆಸ್ 45, ಬಿಜೆಪಿ 4, ಇತರರು 3 ಸ್ಥಾನಗಳನ್ನು ಗಳಿಸಲಿವೆ.