ನವದೆಹಲಿ : ಪಠಾಣ್ ಕೋಟ್ ವಾಯುನೆಲೆ ಮೇಲೆ ನಡೆಸಿದ ದಾಳಿಯ ಮಾದರಿಯಲ್ಲೇ ಜಮ್ಮು-ಕಾಶ್ಮೀರದಲ್ಲೂ ದಾಳಿ ನಡೆಸಲು ಉಗ್ರ ಸಂಘಟನೆಗಳು ಹಾಗೂ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ ಯೋಜನೆ ರೂಪಿಸಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಜೈಶ್ ಎ ಮೊಹಮ್ಮದ್, ಲಷ್ಕರ್ ಎ ತೋಯ್ಬಾ, ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆ ಜತೆ ಪಾಕ್ ಗುಪ್ತಚರ ಸಂಸ್ಥೆ ಐ.ಎಸ್.ಐ ಮಾತುಕತೆ ನಡೆಸಿದ್ದು, ಭಾರತದಲ್ಲಿ ಹಿಂಸಾಚಾರ ನಡೆಸುವುದಕ್ಕೆ ಈ ಎಲ್ಲ ಸಂಘಟನೆಗಳನ್ನೂ ಒಂದೇ ವೇದಿಕೆಯಡಿ ತರಲು ಐ.ಎಸ್.ಐ ಸಂಚು ರೂಪಿಸಿದೆ ಎನ್ನಲಾಗಿದೆ.
ಉಗ್ರರು ಭಾರತಕ್ಕೆ ಆಗಮಿಸಿದ ನಂತರ ಜನಸಾಮಾನ್ಯರ ಜತೆ ಬೆರೆಯಬೇಕು. ಇದರಿಂದ ಉಗ್ರರನ್ನು ಪತ್ತೆ ಹಚ್ಚಲು ಭಾರತೀಯ ಗುಪ್ತಚರ ಸಂಸ್ಥೆಗಳಿಗೆ ಸಾಧ್ಯವಾಗುವುದಿಲ್ಲ ಎಂದು ಉಗ್ರರಿಗೆ ಐ.ಎಸ್.ಐ ಸಲಹೆ ನೀಡಿದೆ ಎನ್ನಲಾಗಿದೆ.
ವಿಶೇಷವಾಗಿ ಜು.2ರಂದು ಆರಂಭ ವಾಗಲಿರುವ ಅಮರನಾಥ ಯಾತ್ರೆಗೆ ಉಗ್ರರ ದಾಳಿ ಭೀತಿಯಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಯಾತ್ರಿಕರ ಮೇಲೆ ದಾಳಿ ನಡೆಸಲು ಉಗ್ರ ಸಂಘಟನೆಗಳು ಯೋಜನೆ ರೂಪಿಸಿರುವ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಇತ್ತೀಚೆಗೆ 18 ಉಗ್ರರು ಪಾಕ್ ನಿಂದ ಭಾರತಕ್ಕೆ ನುಸುಳಿದ್ದು, 15 ಉಗ್ರರು ಇನ್ನೂ ವಿವಿಧ ಭಾಗಗಳಲ್ಲಿ ಅಡಗಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇನ್ನೂ ಹಲವು ಯುವಕರಿಗೆ ಹಿಜ್ಬುಲ್ ಮುಜಾಹಿದೀನ್ ಹಾಗೂ ಜೈಶ್ ಎ ಮೊಹಮ್ಮದ್ ಸಂಘಟನೆಗಳು ತರಬೇತಿ ನೀಡುತ್ತಿವೆ ಎಂದು ತಿಳಿದುಬಂದಿದೆ.