ನವದೆಹಲಿ : ಪಾಕ್ ಗುಪ್ತಚರ ಇಲಾಖೆ ಐಎಸ್ ಐ ಭಾರತದಲ್ಲಿ ಪಠಾಣ್ ಕೋಟ್ ಮಾದರಿಯ ಇನ್ನೊಂದು ದಾಳಿಗೆ ಸಂಚು ರೂಪಿಸಿದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.
ಈ ಸಂಚಿಗೆ ಉಗ್ರಗಾಮಿ ಸಂಘಟನೆಗಳಾದ ಇಂಡಿಯನ್ ಮುಜಾಹಿದ್ದೀನ್ ಮತ್ತು ಜೈಷ್ ಇ ಮೊಹಮದ್ ಸಂಘಟನೆಗಳು ಬೆಂಬಲ ನೀಡಿವೆ ಎಂದು ತಿಳಿದುಬಂದಿದೆ.
ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ ಐ ಈಗಗಾಲೇ ಉತ್ತರ ಭಾರತದ ಕೆಲ ನಗರಗಳಲ್ಲಿರುವ ತನ್ನ ಸ್ಲೀಪರ್ ಸೆಲ್ ಯೋಧರಿಗೆ ನಿರ್ದೇಶನ ನೀಡಿದ್ದು, ಪಠಾಣ್ ಕೋಟ್ ಮತ್ತು ಗುರುದಾಸ್ ಪುರ ದಾಳಿ ಮಾದರಿಯಲ್ಲಿ ಉಗ್ರರ ದಾಳಿ ನಡೆಸಲು ಸಿದ್ಧರಾಗಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಪಂಜಾಬ್ ನಲ್ಲಿರುವ ಸರ್ಕಾರಿ ಗುಪ್ತಚರ ಕೇಂದ್ರಕ್ಕೆ ಲಭಿಸಿರುವ ಮಾಹಿತಿಯ ಪ್ರಕಾರ ಜೆಇಎಮ್ ಉಗ್ರ ಸಂಘಟನೆಯ ಕಮಾಂಡರ್ ಅವೈಸ್ ಮಹಮದ್ ನನ್ನು ಈ ಉಗ್ರರ ಕಾರ್ಯಾಚರಣೆ ನೇತೃತ್ವ ವಹಿಸುವ ಸಲುವಾಗಿಯೇ ನಕಲಿ ಪಾಸ್ ಪೋರ್ಟ್ ಮೂಲಕ ಮಲೇಷ್ಯಾಗೆ ಕಳುಹಿಸಿದ್ದು, ಮಲೇಷ್ಯಾ ಮೂಲಕ ಈತ ಭಾರತ ಪ್ರವೇಶ ಮಾಡಲಿದ್ದಾನಂತೆ. ಮೂಲತಃ ಪಾಕಿಸ್ತಾನದ ಒಕರಾ ಪ್ರಾಂತ್ಯದವನಾದ ಅವೈಸ್ ನ ಬಗ್ಗೆ ಗುಪ್ತಚರ ಇಲಾಖೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.