BW News Bureau : ಸಸ್ಯಕಾಶಿ ಲಾಲ್ ಬಾಗ್ ಮಾವು ಮತ್ತು ಹಲಸು ಮೇಳಕ್ಕೆ ಸಜ್ಜಾಗಿದೆ. ಮೇ 31 ರಿಂದ ಒಂದು ತಿಂಗಳ ಕಾಲ ಅಂದರೆ ಜೂನ್ 29ರವರೆಗೆ ನಡೆಯಲಿರುವ ಮೇಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾವು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಮಲಾಕ್ಷಿ ರಾಜಣ್ಣ, ತೋಟಗಾರಿಕೆ ಇಲಾಖೆ, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಜಂಟಿಯಾಗಿ ಮೇಳವನ್ನು ಆಯೋಜಿಸುತ್ತಿದ್ದು, ಇದಕ್ಕಾಗಿ 95 ಮಳಿಗೆಗಳನ್ನು ವ್ಯವಸ್ಥೆಗೊಳಿಸಲಾಗಿದೆ ಎಂದು ತಿಳಿಸಿದರು.
ಮಾವಿನ ಹಣ್ಣುಗಳನ್ನು ರಫ್ತು ಮಾಡಲು ರಾಜ್ಯದ 4,525 ರೈತರು ಅಪೇಡಾ ಮ್ಯಾಂಗೋ ನೆಟ್ನಲ್ಲಿ ಹೆಸರು ನೋಂದಾಯಿಸಿ ಕೊಂಡಿದ್ದಾರೆ. ಈ ಹಣ್ಣುಗಳು ರಾಸಾಯನಿಕ ಮುಕ್ತವಾಗಿರುವುದಲ್ಲದೆ, ರಫ್ತು ಗುಣಮಟ್ಟದ್ದಾಗಿರುತ್ತವೆ. ಆದ್ದರಿಂದ, ಮ್ಯಾಂಗೋ ನೆಟ್ನಲ್ಲಿ ಹೆಸರು ನೋಂದಾಯಿಸಿಕೊಂಡಿರುವ ರೈತರಿಗೆ ಮಳಿಗೆಗಳನ್ನು ಹಾಕಲು ಆದ್ಯತೆ ಮೇಲೆ ಅವಕಾಶ ನೀಡಲಾಗುವುದು ಎಂದರು.
ರಸಪುರಿ, ಬಾದಾಮಿ, ಸಿಂಧೂರಾ, ಮಲ್ಲಿಕಾ, ತೋತಾಪುರಿ, ನೀಲಂ, ಸಕ್ಕರಿಗುತ್ತ್ತಾ, ಮಲಗೋವಾ ಸೇರಿ ವಿವಿಧ ಬಗೆಯ ಮಾವುಗಳು ಮಾರಾಟಕ್ಕೆ ದೊರೆಯಲಿದೆ ಎಂದು ಹೇಳಿದ್ದಾರೆ.
ಚಂದ್ರ ಹಲಸು, ಲಾಲ್ ಬಾಗ್ ಮಧುರಾ ಸೇರಿ ವಿವಿಧ ಬಗೆಯ ಹಲಸುಗಳು ಖರೀದಿಗೆ ಲಭ್ಯವಿರಲಿದೆ. ಹಲಸಿನ ಹಣ್ಣುಗಳ ಮಾರಾಟಕ್ಕೆ 15 ಮಳಿಗೆಗಳನ್ನು ಗುರುತಿಸಲಾಗಿದ್ದು, ಮಾವಿನಹಣ್ಣು ಮಾರಾಟಕ್ಕೆ 80 ಮಳಿಗೆಗಳನ್ನು ಮೀಸಲಿಡಲಾಗಿದೆ ಎಂದು ವಿವರಿಸಿದರು.