ಬೆಂಗಳೂರು : ವಿಧಾನಸಭೆಯಿಂದ ವಿಧಾನಪರಿಷತ್ ನ ಏಳು ಸ್ಥಾನಗಳಿಗೆ ನಡೆದ ಮತದಾನದಲ್ಲಿ, ಓರ್ವ ನಾಮನಿರ್ದೇಶಿತ ಸದಸ್ಯ ಸೇರಿದಂತೆ ಒಟ್ಟು 225 ಶಾಸಕರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಬೆಳಿಗ್ಗೆ 9ಗಂಟೆಯಿಂದ ಮತದಾನ ಆರಂಭಗೊಂಡಿದ್ದು. ಮಧ್ಯಾಹ್ನದ ವೇಳೆಗೆ ಮುಕ್ತಾಯವಾಗಿದೆ. ಸಂಜೆ 5ಗಂಟೆಯಿಂದ ವಿಧಾನಸೌಧದ ಕೊಠಡಿ 106ರಲ್ಲಿ ಮತಎಣಿಕೆ ಕಾರ್ಯ ನಡೆಯುತ್ತಿದ್ದು, ರಾತ್ರಿಯೊಳಗೆ ಫಲಿತಾಂಶ ಪ್ರಕಟವಾಗಲಿದೆ.
ವಿಧಾನಪರಿಷತ್ ಒಟ್ಟು 7 ಸ್ಥಾನಗಳಿಗೆ 8 ಮಂದಿ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ನ ಅಲ್ಲಂ ವೀರಭದ್ರಪ್ಪ, ಆರ್ ಬಿ. ತಿಮ್ಮಾಪುರ್, ವೀಣಾ ಅಚ್ಚಯ್ಯ, ರಿಜ್ವಾನ್ ಅರ್ಷದ್, ಬಿಜೆಪಿಯ ವಿ.ಸೋಮಣ್ಣ, ಲೇಹರ್ ಸಿಂಗ್ ಹಾಗೂ ಜೆಡಿಎಸ್ ನ ಕೆ.ವಿ.ನಾರಾಯಣಸ್ವಾಮಿ ಮತ್ತು ವೆಂಕಟಪತಿ ಚುನಾವಣಾ ಕಣದಲ್ಲಿದ್ದಾರೆ.
ಮತದಾನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ಶಾಸಕ ಜಮೀರ್ ಅಹ್ಮದ್, ನಾನು ಮಧ್ಯಾಹ್ನ 12ರಿಂದ 1ಗಂಟೆವರೆಗೆ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ಕರೆ ಮಾಡಬಹುದು ಎಂದು ಕಾದೆ. ಆದರೆ ನನಗೆ ಯಾವುದೇ ಕರೆ ಬರಲಿಲ್ಲ. ಹಾಗಾಗಿ ನಾನು ನನ್ನ ಮತವನ್ನು ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಗೆ ಹಾಕಿದ್ದೇನೆ. ರಾಜ್ಯಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುತ್ತೇನೆ ಎಂದು ಹೇಳಿದ್ದಾರೆ.
ನಾನು ಈಗಲೂ ಜೆಡಿಎಸ್ ಪಕ್ಷದಲ್ಲಿದ್ದೇನೆ. ನನಗೆ ವಿಪ್ ತಲುಪಿಯೇ ಇಲ್ಲ. ಬೇಕಾದ್ರೆ ಪಕ್ಷ ಕೈಗೊಳ್ಳುವ ಕ್ರಮಕ್ಕೆ ನಾನು ಬದ್ಧನಾಗಿದ್ದೇನೆ ಎಂದು ತಿಳಿಸಿದ್ದಾರೆ.
ಇನ್ನು ಇದೇ ವೇಳೆ ಮಾತನಾಡಿದ ಜೆಡಿಎಸ್ ನ ಬಂಡಾಯ ಶಾಸಕ ಚಲುವರಾಯಸ್ವಾಮಿ, ನಾನು ನನ್ನ ಮತವನ್ನು ಪಕ್ಷದ ಅಭ್ಯರ್ಥಿಗೆ ಹಾಕಿದ್ದೇನೆ ಎಂದು ಹೇಳಿದ್ದಾರೆ.