ಬಾಲಸೋರ್ : ಭೂಮಿಯಿಂದ ಬಾನಿಗೆ ನೆಗೆಯುವ ಏರ್ ಮಿಸೈಲ್ (ಕ್ಷಿಪಣಿ) ಪರೀಕ್ಷೆಯನ್ನು ಬುಧವಾರ ಕೇಂದ್ರ ರಕ್ಷಣಾ ಇಲಾಖೆ ನೆಲೆ ಓಡಿಶಾದ ಕರಾವಳಿಯಲ್ಲಿ ನಡೆಸಲಿದೆ. ಹವಾಮಾನ ಅನುಕೂಲಕರವಾಗಿದ್ದಲ್ಲಿ ಕ್ಷಿಪಣಿ ಪರೀಕ್ಷೆಯನ್ನು ಓಡಿಶಾದ ಚಂಡಿಪುರದಿಂದ ನಡೆಸಲು ಉದ್ದೇಶಿಸಲಾಗಿದೆ.
ಇಸ್ರೇಲ್ನೊಂದಿಗೆ ಭಾರತ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕ್ಷಿಪಣಿ ಇದಾಗಿದೆ ಎಂದು ಭಾರತದ ರಕ್ಷಣಾ ಇಲಾಖೆಯಾದ ಡಿಆರ್ಡಿಓ ಮೂಲಗಳು ತಿಳಿಸಿವೆ. ಕ್ರಿಯಾತ್ಮಕ ಕಣ್ಗಾವಲು ಮತ್ತು ಬೆದರಿಕೆ ಭೀತಿಯನ್ನು ಗುರುತಿಸುವ ರಾಡಾರ್ನ್ನು ಈ ಕ್ಷಿಪಣಿ ಹೊಂದಿದೆ.
ಪರೀಕ್ಷಾರ್ಥ ಪ್ರಯೋಗ ನಡೆಸಲಿರುವ ಬಾಲಸೋರ್ ಕರಾವಳಿಯ 2.5 ಕಿ. ಮೀ. ವ್ಯಾಪ್ತಿಯ ಆಸುಪಾಸಿನ ಗ್ರಾಮಸ್ಥರನ್ನು ಸುರಕ್ಷತೆ ದೃಷ್ಟಿಯಿಂದ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಬಂಗಾಳಕೊಲ್ಲಿಯಲ್ಲಿ ವ್ಯಾಪ್ತಿಯಲ್ಲಿರುವ ಬಾಲಸೋರ್, ಭದ್ರಾಖ್, ಕೇಂದ್ರಪಾರಾ ಪ್ರದೇಶಗಳ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ ಎಂದು ಬಾಲಸೋರ್ ಜಿಲ್ಲಾ ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.