ಪುತ್ತೂರು : 'ಇದು ಯಜ್ಞ ವೇದಿಕೆ. ಯಜ್ಞಕ್ಕೆ ಬೇಕಾಗುವ ಹವಿಸ್ಸೆಲ್ಲವೂ ಗೋಮಾತೆಯಿಂದಲೇ ಬರುತ್ತದೆ. ಅಂತಹ ಗೋ ಮಾತೆ ಈ ವೇದಿಕೆಯ ಮೇಲೆ ವಿರಾಜಮಾನಳಾಗಿದ್ದಾಳೆ. ಸಂತರು ಅಂದ್ರೆ ಮಂತ್ರ, ಹವಿಸ್ಸಿನ ಜೊತೆ ಮಂತ್ರ ಸೇರಿದರೆ ಯಜ್ಞ ಆಗುತ್ತದೆ'.
'ಯಜ್ಞ ಪೂರ್ಣವಾಗಲು ಅಗ್ನಿ ಬೇಕು, ಅಗ್ನಿ ಎಲ್ಲಿ ಇದೆ ಅಂದರೆ ಅದು ನಿಮ್ಮೆಲ್ಲರಲ್ಲಿ ಇದೆ. ಗೋಮಾತೆಯನ್ನು ರಕ್ಷಿಸಬೇಕೆಂಬ ಕಿಚ್ಚು ನಿಮ್ಮಲ್ಲಿ ಇದೆ. ಅದೇ ಅಗ್ನಿ. ಆ ಅಗ್ನಿಯನ್ನು ಪ್ರಜ್ವಲಿಸಿಕೊಂಡರೆ ಭಾರತ ಬೆಳಗುವುದು ನಿಸ್ಸಂಶಯ. ಅಗ್ನಿಯನ್ನು ತಮ್ಮಲ್ಲಿ ಪ್ರಜ್ವಲಿಸಿಕೊಂಡವರು ಭಾರತರು, ನೀವೆಲ್ಲ ಅಂಥ ಭಾರತರು' ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ನುಡಿದರು.
ಗುರುವಾರ, 7 ಜುಲೈ 2016 ರಂದು ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ನಡೆದ ಗೋ ಸಂತ ಸಂಗಮ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, 'ಮರ ತನಗಾಗಿ ಹಣ್ಣು ಬಿಡುವುದಿಲ್ಲ, ಅದು ಪ್ರಾಣಿಗಳಿಗಾಗಿ.. ಹಣ್ಣು ಬಿಟ್ಟ ಮರಕ್ಕೇ ಕಲ್ಲನ್ನು ಎಸೆಯುವುದು, ಆದರೂ ಕಲ್ಲು ಬಿದ್ದ ಮೇಲೂ ಅದು ಕೊಡುವುದು ಹಣ್ಣನ್ನೇ' ಎಂದು ಶ್ರೀಗಳು ಮಾರ್ಮಿಕವಾಗಿ ಹೇಳಿದರು.
'ಹಾಗೆಯೇ, ನದಿ ತನಗಾಗಿ ಹರಿಯುವುದಿಲ್ಲ.. ನದಿ ಹರಿಯುವುದು ಮನುಷ್ಯ ತಂಪಾಗಲಿ ಎಂದು.. ಆದರೆ ಮನುಷ್ಯನಿಂದಾಗಿ ಇಂದು ನದಿ ಒಣಗಿದೆ, ಮಲಿನಗೊಂಡಿದೆ. ಗೋವು ಹಾಲು ಕೊಡುವುದು ಕೇವಲ ತನ್ನ ಕರುವಿಗಾಗಿ ಅಲ್ಲ, ಮನುಜರಿಗೂ ಹಾಲು ಕೊಡುತ್ತದೆ.. ಆದರೆ ಗೋವಿನ ಸ್ಥಿತಿ ಇಂದು ಚಿಂತಾಜನಕವಾಗಿದೆ' ಎಂದು ರಾಘವೇಶ್ವರ ಶ್ರೀಗಳು ಸಮಾಜದ ಇಂದಿನ ಪರಿಸ್ಥಿತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಸಂತರ ಮೇಲೆ ನಿರಂತರವಾಗಿ ನಡೆಯುತ್ತಿರುವ ಆಕ್ರಮಣದ ಬಗ್ಗೆ ಪ್ರಸ್ತಾಪಿಸುತ್ತಾ, ಶ್ರೀಗಳು, 'ಸಮಾಜಕ್ಕೊಸ್ಕರ ಬದುಕುವವನು ಸಂತ.. 'ಸ್ವಂತ'ದ ಒತ್ತನ್ನು ತೆಗೆದರೆ ಸಂತ. ಆ ಸಂತರಿಗೆ ವಿಚಿತ್ರ ಪರಿಸ್ಥಿತಿ ಏರ್ಪಟ್ಟಿದೆ ಇಂದು. ಸಂತರಿಗೆ ಸಮಾನ ತೂಕದ್ದು (ಬೆಲೆಯುಳ್ಳದ್ದು) ಅಂದರೆ ಅದು ಗೋಮಾತೆ ಮಾತ್ರ. ಎರಡೂ ಪರೋಪಕಾರಕ್ಕಾಗಿ ಬದುಕುತ್ತವೆ.. ಗೋವು ಹಾಲು ಕೊಟ್ಟರೆ, ಸಂತರು ಜ್ಞಾನ ಕೊಡುತ್ತಾರೆ'.
ಇವತ್ತು ಎರಡನ್ನೂ ಸಂಕಟಕ್ಕೆ ದೂಡಿದ್ದೇವೆ ನಾವು.. ಗೋವು ತಾನು ಬದುಕಿ ಹಾಲು ಕೊಡ್ತೇನೆ, ಅಮೃತ ಕೊಡ್ತೇನೆ, ಅಂದರೆ ನಾವು ಅದರ ರಕ್ತ ಕೇಳ್ತೇವೆ.. ಮಾಂಸ ಕೇಳ್ತೇವೆ..ಎಂತಹ ಪರಿಸ್ಥಿತಿ ಇದು? ಎಂದು ಶ್ರೀಗಳು ನುಡಿದರು.
'ಗೋಮೂತ್ರದಲ್ಲಿ ಚಿನ್ನ ಇದೆ ಎಂದು ವಿಜ್ಞಾನ ಹೇಳಿದೆ, ಸಗಣಿ ವಜ್ರಕ್ಕೆ ಸಮಾನ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ, ಯಾವುದೇ ತಪ್ಪನ್ನು ಮಾಡದ ಗೋವುಗಳನ್ನು ಯಾಕೆ ಶಿಕ್ಷಿಸುತ್ತೀರಿ ಎಂಬ ಪ್ರಶ್ನೆಗೆ ಇಂದು ಸರಕಾರದ ಬಳಿಯಾಗಲಿ, ವಿಜ್ಞಾನಿಗಳ ಬಳಿ ಉತ್ತರ ಇಲ್ಲ' ಎಂದು ಶ್ರೀಗಳು ಹೇಳಿದರು.
ಸಂತರನ್ನು ಗುರಿಯಾಗಿಸಿಕೊಂಡು ಪ್ರಸ್ತುತ ನಡೆಯುತ್ತಿರುವ ಅಪಪ್ರಚಾರದ ಬಗ್ಗೆ ಮಾತನಾಡಿದ ಶ್ರೀಗಳು, 'ಸಂತರು ಪೀಸ್ (ಶಾಂತಿ) ಕೊಡ್ತಾರೆ.. ಆದರೆ ನಾವು ರುಪೀಸ್ (ಹಣ) ಕೇಳ್ತೇವೆ, ಅವರು ಕೊಡದಿದ್ದಾಗ ಶುರುವಾಯ್ತು ಬ್ಲಾಕ್ ಮೇಲ್.. ಸಂತರನ್ನು ಕುಲಗೆಟ್ಟವರು ಎಂದು ಬಿಂಬಿಸುವ ಪ್ರಯತ್ನ ನಡೀತಾ ಇದೆ.. ಎಷ್ಟೋ ಗೋವುಗಳು, ಒಂದಷ್ಟು ಸಂತರ ಹತ್ಯೆ ಆಯಿತು' . ವ್ಯವಸ್ಥೆಯೂ ಕುತಂತ್ರಕ್ಕೆ ಕೈಜೋಡಿಸುವುದು ದುರದೃಷ್ಟಕರ. ಬದುಕಲಿಕ್ಕೆ ಸಾಧ್ಯವಿಲ್ಲದ ಸನ್ನಿವೇಶವನ್ನು ಸಂತರಿಗೆ ಉಂಟುಮಾಡುತ್ತಿದ್ದಾರೆ' ಎಂದು ನುಡಿದರು.
ಮುಂದುವರಿದು, 'ಕೇವಲ ಸಮಾಜ ಘಾತುಕರಿಂದ ಇಷ್ಟೆಲ್ಲ ಆಗ್ತಾ ಇರಲಿಲ್ಲ, ನಮ್ಮವರೇ ಕೆಲವಷ್ಟು ಸೇರಿಕೊಂಡಿರುತ್ತಾರೆ. ಕೇವಲ ಅನ್ಯಮತೀಯರು ಮಾತ್ರ ಆಕ್ರಮಣ ಮಾಡುವುದಿಲ್ಲ, 'ಅನ್ಯಮಠೀ'ಯರೂ ಮಾಡ್ತಾರೆ.. ಅನ್ಯಮತೀಯರು ದಾಳಿ ಮಾಡಿದ್ರೆ ನಮಗೆ ರೋಷ ಬರುತ್ತದೆ.. ಅನ್ಯ ಮಠೀಯರು, ಅಂದ್ರೆ ನಮ್ಮವರೇ ದಾಳಿ ಮಾಡಿದ್ರೆ ಅದಕ್ಕೆ ಏನು ಹೇಳಬೇಕು ನಾವು?' ಎಂದು ಪ್ರಶ್ನಿಸಿದರು.
'ನಾವು ನಮ್ಮ ದೇಶ, ಧರ್ಮ, ಸಂಸ್ಕೃತಿಗೆ ಸೇರಿದವರು ಎಂದಿಗೂ ಒಟ್ಟಾಗಿ ಇರಬೇಕು, ನಮ್ಮನ್ನು ನಾವು ಬಿಟ್ಟುಕೊಡಬಾರದು. ಹೊರಗಿನ ಆಕ್ರಮಣದಿಂದ ಏನೂ ಮಾಡಲು ಸಾಧ್ಯವಿಲ್ಲ, ನಮ್ಮವರು ಸೇರಿಕೊಂಡಾಗ ಮಾತ್ರ ಅನ್ಯಾಯ ಘಟಿಸಲು ಸಾಧ್ಯ. ನಮ್ಮ ಮನೆಯನ್ನು ನಾವು ಸರಿ ಮಾಡಿಕೊಳ್ಳಬೇಕು. ನಮ್ಮ ಒಳಗೂ ಹೊರಗೂ ನಾವು ಸರಿ ಮಾಡಿಕೊಳ್ಳಬೇಕು. ನಮ್ಮ ಒಳಗಿನ ಅಲ್ಪಸಂಖ್ಯಾಕರನ್ನು ನಾವು ದೂರ ಇಟ್ಟು ಕೊಳ್ಳೋಣ. ನಮ್ಮವರೇ ನಮ್ಮ ಮೇಲೆ ಆಕ್ರಮಣ ಮಾಡಿದರೆ, ನಮ್ಮ ಮನೆಗೆ ನಾವೇ ಬೆಂಕಿ ಹಚ್ಚಿಕೊಂಡ ಹಾಗೆ. ನಿಮ್ಮನ್ನು ನೀವು ಮೂರು ಕಾಸಿಗೆ ಮಾರಿಕೊಳ್ಳಬೇಡಿ, ನಮ್ಮನ್ನು ನಾವು ಎಂದಿಗೂ ಬಿಟ್ಟುಕೊಡಬಾರದು' ಎಂದು ಕಿವಿಮಾತು ಹೇಳಿದರು.
'ಒಬ್ಬೊಬ್ಬ ಸಂತರೂ ಹಿಂದೂ ಧರ್ಮದ ಕೋಟೆಯ ಕಲ್ಲುಗಳು, ಕಲ್ಲು ಸರಿಯಬಾರದು. ಒಟ್ಟಿಗೆ ಇರಬೇಕು, ಕಲ್ಲು ಸರಿದರೆ ಆ ಕಲ್ಲಂತೂ ಹೋಯಿತು, ಹಿಂದೂ ಧರ್ಮಕ್ಕೇ ಆಪತ್ತು ಅದು' ಎಂದು ಹೇಳುತ್ತಾ, ಕೆಲವರು ಸಮಸ್ಯೆ ಇದ್ದಾಗ ಮಾತ್ರ ಜೊತೆಗಿರುತ್ತಾರೆ, ಕೆಲವರು ಎಲ್ಲವೂ ಸರಿಯಾಗಿದ್ದಾಗ ಮಾತ್ರ ಇರುತ್ತಾರೆ. ಆದರೆ ಪುತ್ತೂರಿನ ಜನ ಯಾವಾಗಲೂ ನಮ್ಮ ಜೊತೆಗೆ ಇದ್ದೀರಿ, ಧರ್ಮ ಜಯಿಸಲಿ' ಎಂದು ಹರಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಲ್ಲಡ್ಕ ಡಾ.ಪ್ರಭಾಕರ ಭಟ್ ಅವರು ಹಿಂದೂ ಸಂಸ್ಕೃತಿ, ಗೋವು ಹಾಗೂ ಸಂತರ ಮೇಲಿನ ದಾಳಿಯನ್ನು ಖಂಡಿಸಿ ಮಾತನಾಡಿ, 'ದಾಳಿ ಮಾಡುತ್ತಿರುವವರು ಅನ್ಯಮತೀಯರಲ್ಲ, ಹಿಂದೂ ಧರ್ಮ ರಕ್ಷಕರು ಎಂದು ಹೇಳಿಕೊಳ್ಳುತ್ತಿರುವ ಬುದ್ಧಿಜೀವಿಗಳು' ಎಂದು ಘರ್ಜಿಸಿದರು.
ಸಂತರು ತಪ್ಪು ಮಾಡಲು ಸಾಧ್ಯವೇ ಇಲ್ಲ. ಎಲ್ಲ ರೀತಿಯಲ್ಲಿಯೂ ಪರೀಕ್ಷೆಗೆ ಒಳಪಟ್ಟು ಆ ಶ್ರೇಷ್ಠ ಸ್ಥಾನಕ್ಕೆ ಏರಿರುತ್ತಾರೆ. ಅವರ ಮೇಲೆ ಆಕ್ರಮಣವಾದಾಗ ನಾವು ಅವರೊಂದಿಗೆ ನಿಲ್ಲುತ್ತೇವೆಯೋ, ಅಥವಾ ಸುಮ್ಮನೆ ಇರುತ್ತೇವೆಯೋ ಎನ್ನುವುದು ನಮ್ಮ ಶ್ರದ್ಧೆಯ ವಿಚಾರ' ಎಂದು ನುಡಿದರು.
ಗೋ ಸಂತ ಸಂಗಮದಲ್ಲಿ ಕಾಳಹಸ್ತಿ ಶ್ರೀಗಳು, ವಜ್ರದೇಹಿಮಠದ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮಿಗಳು ಹಲವಾರು ಗಣ್ಯರು, ಅಪಾರ ಭಕ್ತ ಶಿಷ್ಯರು ಭಾಗವಹಿಸಿದ್ದರು.
ಚಿತ್ರ,ವರದಿ: ಶಿಶಿರ ಹೆಗಡೆ