ಶೀಮ್ಲಾ : ಮುಂದಿನ ಆರು ತಿಂಗಳ ಒಳಗಾಗಿ ದೇಶಾದ್ಯಂತ ಗೋಹತ್ಯೆ ನಿಷೇಧಿಸಬೇಕು ಎಂದು ಹಿಮಾಚಲ ಪ್ರದೇಶ ಹೈಕೋರ್ಟ್ ಕೇಂದ್ರ ಸರಕಾರಕ್ಕೆ ಗಡುವು ನೀಡಿದೆ.
ರಾಜ್ಯದ ಹಿಂದೂ ಸಂಘಟನೆಗಳು ಹಾಗೂ ಭಾರತೀಯ ಗೋವಂಶ ರಕ್ಷಣಾ ಸಂವರ್ಧನ ಪರಿಷದ್ ಸಲ್ಲಿಸಿದ ಮನವಿಯನ್ನು ಪರಿಗಣಿಸಿರುವ ಹೈಕೋರ್ಟ್ ಈ ಆದೇಶ ಹೊರಡಿಸಿದೆ.
ಗೋಹತ್ಯಾ ನಿಷೇಧ ಆಯಾ ರಾಜ್ಯ ಸರ್ಕಾರಗಳಿಗೆ ಬಿಟ್ಟ ವಿಷಯ ಎಂಬ ಕೇಂದ್ರ ಸರ್ಕಾರದ ವಾದವನ್ನು ತಿರಸ್ಕರಿಸಿರುವ ಹಿಮಾಚಲ ಪ್ರದೇಶ ಹೈಕೋರ್ಟ್, ದನ- ಕರುಗಳ ಆಮದು ಮತ್ತು ರಫ್ತು, ಗೋಮಾಂಸ ಮತ್ತು ಗೋಮಾಂಸದ ಉತ್ಪನ್ನಗಳ ಮಾರಾಟವನ್ನು ಆರು ತಿಂಗಳುಗಳೊಳಗಾಗಿ ಕೇಂದ್ರ ಸರ್ಕಾರ ನಿಷೇಧಿಸಬೇಕು ಎಂದು ಸೂಚನೆ ನೀಡಿದೆ.
ಜಸ್ಟಿಸ್ ರಾಜೀವ್ ಶರ್ಮಾ ಮತ್ತು ಜಸ್ಟಿಸ್ ಸುರೇಶ್ವರ್ ಠಾಕೂರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ, 2015, ಅಕ್ಟೊಬರ್ 14 ರಲ್ಲೇ ದನ- ಕರುಗಳ ಆಮದು ಮತ್ತು ರಫ್ತು, ಗೋಮಾಂಸ ಮತ್ತು ಗೋಮಾಂಸದ ಉತ್ಪನ್ನಗಳ ಮಾರಾಟವನ್ನು ನಿಷೇಧಿಸುವಂತೆ ಆದೇಶ ನೀಡಲಾಗಿತ್ತು ಎಂದು ಹಿಂದಿನ ಆದೇಶವನ್ನು ಉಲ್ಲೇಖಿಸಿ, ಇದೀಗ ಇನ್ನೊಮ್ಮೆ ಅದೇಶ ನೀಡಿದ್ದು ಮುಂದಿನ ಆರು ತಿಂಗಳುಗಳೊಳಗೆ ದೇಶದಲ್ಲಿ ಗೋ ಹತ್ಯೆ ನಿಷೇಧಕ್ಕೆ ಕ್ರಮಕೈಗೊಳ್ಳಬೇಕು ಎಂದು ಖಡಕ್ ನಿರ್ದೇಶನ ನೀಡಿದೆ.
ಆದೇಶದ ಪ್ರತಿಯನ್ನು ರಾಷ್ಟ್ರೀಯ ಕಾನೂನು ಆಯೋಗಕ್ಕೂ ಕಳುಹಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.