ನವದೆಹಲಿ : ದೇಶಾದ್ಯಂತ ಏಕರೂಪದ ತೆರಿಗೆ ವ್ಯವಸ್ಥೆ ಜಾರಿಗೆ ತರುವ ಕೇಂದ್ರ ಸರ್ಕಾರದ ಬಹುನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಸೂದೆ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ಬುಧವಾರ ರಾಜ್ಯಸಭೆಯಲ್ಲಿ ಮಸೂದೆಯನ್ನು ಮಂಡಿಸಲು ಸರ್ಕಾರ ನಿರ್ಧರಿಸಿದೆ.
ಜಿಎಸ್ಟಿ ಮಸೂದೆ ಜಾರಿ ಹಿನ್ನೆಲೆಯಲ್ಲಿ ಮುಂದಿನ ಮೂರು ದಿನಗಳ ಕಾಲ ಕಲಾಪದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ತನ್ನೆಲ್ಲಾ ಸದಸ್ಯರಿಗೆ ಬಿಜೆಪಿ ವಿಪ್ ಜಾರಿ ಮಾಡಿದೆ.
ವಿಪಕ್ಷಗಳ ಸಲಹೆಯಂತೆ ಈಗಾಗಲೇ ಮಸೂದೆಗೆ ಕೆಲವೊಂದು ತಿದ್ದುಪಡಿ ತರಲು ಒಪ್ಪಿರುವ ಎನ್ ಡಿಎ ಸರ್ಕಾರ ಈ ಅಂಶಗಳನ್ನು ಮಸೂದೆಯಲ್ಲಿ ಸೇರಿಸಿ ಆದಷ್ಟು ಬೇಗ ಮಸೂದೆ ಮಂಡಿಸಲು ನಿರ್ಧರಿಸಿದೆ.
ಮಸೂದೆಗೆ ಬಹುತೇಕ ವಿಪಕ್ಷಗಳು ಸಹಮತ ವ್ಯಕ್ತಪಡಿಸಿವೆ. ಕಾಂಗ್ರೆಸ್ ಕೂಡ ವಿಧೇಯಕದ ಬಗ್ಗೆ ಬಹುತೇಕ ಸಹಮತ ವ್ಯಕ್ತಪಡಿಸಿದೆ ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಆ.12ಕ್ಕೆ ಮುಕ್ತಾಯಗೊಳ್ಳಲಿರುವ ಸಂಸತ್ತಿನ ಮುಂಗಾರು ಅಧಿವೇಶನದೊಳಗೆ ಮಸೂದೆ ಅಂಗೀಕರಿಸುವ ವಿಶ್ವಾಸ ಸರ್ಕಾರದ್ದು.
ಜಿಎಸ್ ಟಿ, ಸಾಂವಿಧಾನಿಕ ತಿದ್ದುಪಡಿ ಮಸೂದೆಯಾಗಿರುವ ಹಿನ್ನಲೆಯಲ್ಲಿ ಅದಕ್ಕೆ ರಾಜ್ಯಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. ಸದ್ಯ ರಾಜ್ಯಸಭೆಯಲ್ಲಿ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಸಹ ವಿಧೇಯಕಕ್ಕೆ ಸಹಮತ ತೋರಿಸಿರುವುದರಿಂದ ಈ ಬಾರಿ ಮಸೂದೆ ಪಾಕ್ ಆಗುವ ಖಚಿತ ವಿಶ್ವಾಸ ಸರ್ಕಾರಕ್ಕಿದೆ.