ಇಂಫಾಲ್ : ಸೇನಾಪಡೆಗಳ ದೌರ್ಜನ್ಯದ ವಿರುದ್ಧ ಬರೋಬ್ಬರಿ 16 ವರ್ಷಗಳಿಂದ ಸುದೀರ್ಘವಾಗಿ ಆಮರಣಾಂತ ಉಪವಾಸ ಸತ್ಯಾಗ್ರಹದ ಹೋರಾಟ ನಡೆಸುತ್ತಿದ್ದ ಐರನ್ ಲೇಡಿ, ಐರೋಮ್ ಶರ್ಮಿಳಾ ತಮ್ಮ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದಾರೆ.
ಮಣಿಪುರದಲ್ಲಿ ಜಾರಿಯಲ್ಲಿರುವ ಸೇನಾ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಶರ್ಮಿಳಾ, ಕಳೆದ 16 ವರ್ಷಗಳಿಂದ ಉಪವಾಸ ಕೈಗೊಂಡಿದ್ದರು. ಇಷ್ಟು ವರ್ಷಗಳಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರೂ ಯಾವುದೇ ಫಲ ಸಿಕ್ಕಿಲ್ಲ, ಅಲ್ಲದೇ ಸರ್ಕಾರ ಕೂಡ ಯಾವುದೇ ಭರವಸೆ ನೀಡದ ಹಿನ್ನಲೆಯಲ್ಲಿ ತಮ್ಮ ಸತ್ಯಾಗ್ರಹವನ್ನು ಅಂತ್ಯಗೊಳಿಸುತ್ತಿರುವುದಾಗಿ ಇತ್ತೀಚೆಗಷ್ಟೇ ಐರೋಮ್ ಶರ್ಮಿಳಾ ಪ್ರಕಟಿಸಿದ್ದರು.
ಆಸ್ಪತ್ರೆಯೊಂದರಲ್ಲಿ ಕೈದಿಯಾಗಿರುವ ಶರ್ಮಿಳಾ ಅವರನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಮಂಗಳವಾರ ಹಾಜರುಪಡಿಸಲಾಯಿತು. ಬಿಗಿ ಭದ್ರತೆಯಲ್ಲಿ ಆಂಬ್ಯುಲೆನ್ಸ್ ನಲ್ಲಿ ಶರ್ಮಿಳಾ ಅವರನ್ನು ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿದ್ದರು. ತಾನು ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸುವ ನಿರ್ಧಾರ ಕೈಗೊಂಡಿದ್ದೇನೆ. ಹಾಗಾಗಿ ತನ್ನನ್ನು ಬಿಡುಗಡೆ ಮಾಡಬೇಕು ಎಂದು ಶರ್ಮಿಳಾ ಕೋರ್ಟ್ ನಲ್ಲಿ ಮನವಿ ಮಾಡಿಕೊಂಡರು.
ಬಳಿಕ ಕೋರ್ಟ್ ಶರ್ಮಿಳಾ ಬಿಡುಗಡೆಗೆ ಸಮ್ಮತಿ ನೀಡಿ, 10 ಸಾವಿರ ರೂಪಾಯಿ ಬೇಲ್ ಬಾಂಡ್ ಗೆ ಸಹಿ ಹಾಕುವಂತೆ ಸೂಚಿಸಿತು. ಆರಂಭದಲ್ಲಿ ಶರ್ಮಿಳಾ ಬಾಂಡ್ ಗೆ ಸಹಿ ಹಾಕಲು ನಿರಾಕರಿಸಿದ್ದರು. ತದನಂತರ ಸಹಿ ಹಾಕುವ ಮೂಲಕ ಶರ್ಮಿಳಾ ಅವರನ್ನು ಬಿಡುಗಡೆ ಮಾಡಲಾಯಿತು.
ತಮ್ಮ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಬಳಿಕ ಮಾತನಾಡಿದ ಐರೋಮ್ ಶರ್ಮಿಳಾ, ಕಳೆದ 16 ವರ್ಷಗಳಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರೂ ಸರ್ಕಾರದಿಂದ ಯಾವುದೇ ಭರವಸೆ ಸಿಕ್ಕಿಲ್ಲ. ಹಾಗಾಗಿ ನಾನೀಗ ವಿಭಿನ್ನ ರೀತಿಯಲ್ಲಿ ಪ್ರತಿಭಟಿಸಲು ನಿರ್ಧರಿಸಿದ್ದೇನೆ. ಅದರಲ್ಲೊಂದು ನಾನು ಚುನಾವಣೆಗೆ ಸ್ಪರ್ಧಿಸಿ, ಮಣಿಪುರದ ಮುಖ್ಯಮಂತ್ರಿಯಾಗಿ, ಸೇನಾ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು ರದ್ದುಪಡಿಸುವ ಇಚ್ಛೆ ನನ್ನದಾಗಿದೆ ಎಂದು ತಿಳಿಸಿದ್ದಾರೆ.
2000, ನವೆಂಬರ್ 1 ರಂದು ಮಣಿಪುರದ ಇಂಫಾಲ್ ವಿಮಾನನಿಲ್ದಾಣದ ಬಳಿ ಮಾಲೋಂ ಎಂಬಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಹತ್ತು ಜನರನ್ನು ಅಸ್ಸಾಂ ರೈಫಲ್ಸ್ ಯೋಧರು ಗುಂಡಿಕ್ಕಿ ಕೊಂದಿದ್ದರು. ಇದನ್ನು ಪ್ರತಿಭಟಿಸಿ ಶರ್ಮಿಳಾ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಐರೋಮ್ ಶರ್ಮಿಳಾ ಅವರು ನಡೆಸಿದ ಉಪವಾಸ ವಿಶ್ವದ ಅತಿ ಸುದೀರ್ಘ ಸತ್ಯಾಗ್ರಹವಾಗಿದೆ. ಅವರಿಗೆ ಬಲವಂತವಾಗಿ ನೇಸಲ್ ಟ್ಯೂಬ್ ಮೂಲಕ ಗ್ಲೂಕೋಸ್ ನೀಡಲಾಗುತ್ತಿತ್ತು.