ಬೆಂಗಳೂರು : ಇನ್ನುಮುಂದೆ ವಿಧಾನಮಂದಲದ ಉಭಯ ಸದನಗಳ ಕಲಾಪದ ವೆಳೆ ಗದ್ದಲೆ, ಕೋಲಾಹಲ, ಧರಣಿ ನಡೆಸುವುದಕ್ಕೆ ಬ್ರೇಕ್ ಬೀಳಲಿದೆ. ಸುಗಮ ಕಲಾಪಕ್ಕಾಗಿ ನಿಯಮಾವಳಿಗಳಿಗೆ ತಿದ್ದುಪಡಿ ತರಲು ವಿಧಾನಸಭೆ ಸ್ಪೀಕರ್ ಕೋಳಿವಾಡ ನೇತೃತ್ವದಲ್ಲಿ ರೂಲ್ಸ್ ಕಮಿಟಿ ರಚನೆಯಾಗಿದೆ.
ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ರೂಲ್ಸ್ ಕಮಿಟಿಯ ಕೋ-ಚೇರ್ಮನ್ ಆಗಿರುತ್ತಾರೆ. ಒಟ್ಟು 12 ಜನರ ಸದಸ್ಯರಿರಲಿರುವ ಕಮಿಟಿಯಲ್ಲಿ ಸದನದ ಸಂಖ್ಯಾಬಲದ ಆಧಾರದಲ್ಲಿ ವಿಧಾನಸಭೆಯಿಂದ 9 ಮತ್ತು ವಿಧಾನ ಪರಿಷತ್ನಿಂದ ಮೂವರು ಸದಸ್ಯರು ಇರಲಿದ್ದಾರೆ. ಸ್ಪೀಕರ್ ನೇತೃತ್ವದಲ್ಲಿ ಎಲ್ಲ ಕಡೆ ಅಧ್ಯಯನ ನಡೆಸಿ ದೇಶದಲ್ಲೇ ಮೊದಲ ಬಾರಿಗೆ ರೂಲ್ಸ್ ಕಮಿಟಿ ಕರ್ನಾಟಕದಲ್ಲಿ ರಚನೆಯಾಗಲಿದೆ. ಇನ್ನು ಹಾಲಿ ಇರುವ 12 ಪಾರ್ಲಿಮೆಂಟರಿ ಕಮಿಟಿಗಳ ಜತೆ 13ನೆಯದಾಗಿ ರೂಲ್ಸ್ ಕಮಿಟಿ ರೂಪುಗೊಳ್ಳಲಿದೆ.
ಅಧಿವೇಶನದ ಸಂದರ್ಭದಲ್ಲಿ ಪ್ರತೀ ದಿನದ ಕಲಾಪದ ಮೊದಲ ಅವಧಿಯ 4 ಗಂಟೆಗಳು ಸರ್ಕಾರಿ ಕಾರ್ಯ-ಕಲಾಪಕ್ಕೆ ಮೀಸಲಾಗಿರಲಿದೆ. ಪ್ರಶ್ನೋತ್ತರ ಅವಧಿ, ಗಮನ ಸೆಳೆಯುವ ಸೂಚನೆಗಳು, ಶೂನ್ಯವೇಳೆ ಮೊದಲಾದವು ಈ ಅವಧಿಯಲ್ಲಿ ನಡೆಯಬೇಕು. ಭೋಜನ ವಿರಾಮದ ಬಳಿಕದ ಮಧ್ಯಾಹ್ನದ ಅವಧಿಯಲ್ಲಿ ಮಾತ್ರ ರಾಜ್ಯದ ಅಂದಿನ ಗಂಭೀರ ಸ್ವರೂಪದ ವಿಚಾರಗಳ ಬಗ್ಗೆ ಪ್ರಸ್ತಾಪಕ್ಕೆ ಅವಕಾಶ ಇರಬೇಕು. ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ನಿಲುವಳಿ ಮಂಡನೆಗೆ ಅವಕಾಶ ಇರುವುದಿಲ್ಲ. ಪ್ರಶ್ನೋತ್ತರದಲ್ಲಿ 15 ಪ್ರಶ್ನೆಗಳ ಪೈಕಿ 10 ಪ್ರಶ್ನೆಗಳನ್ನು ಲಾಟರಿ ಮುಖಾಂತರ ಆಯ್ಕೆ ಮಾಡಿ ಉಳಿದ 5 ಪ್ರಶ್ನೆಗಳಲ್ಲಿ ಅತ್ಯಾವಶ್ಯಕ, ಗಂಭೀರ ವಿಚಾರಗಳಿಗೆ ಸಂಬಂಧಿಸಿದವುಗಳಿಗೆ ಆದ್ಯತೆ ಕೊಡಬೇಕು.
ಸುಗಮ ಕಲಾಪದ ನಡೆಸಬೇಕು ಎಂಬ ಉದ್ದೇಶದಿಂದ ವಿಧಾನಸಭಾಧ್ಯಕ್ಷರು ಹೊಸ ಚಿಂತನೆ ನಡೆಸಿದ್ದಾರೆ. ಆದರೆ, ಇದು ಎಷ್ಟರಮಟ್ಟಿಗೆ ಜಾರಿಗೆ ಬರಲಿದೆ ಎಂಬುದನ್ನು ಕಾದುನೋಡಬೇಕು.