ಬೆಂಗಳೂರು : ಒಮ್ಮೆ ಪರೀಕ್ಷೆ ಆಗಿ ಅತ್ಯುತ್ತಮ ಅಂಕ ಪಡೆದು ತೇರ್ಗಡೆ ಆದವರಿಗೆ, ಮತ್ತದೇ ಪರೀಕ್ಷೆ ಮಾಡುವುದರಲ್ಲಿ ಅರ್ಥವಿರುವುದಿಲ್ಲ. ಜಗತ್ತು ಗೋಮಾತೆಯನ್ನು ಪದೇ ಪದೇ ಪರೀಕ್ಷಿಸುತ್ತಿದೆ. ಗೋಮಾತೆ ಪ್ರತಿ ಪರೀಕ್ಷೆಯಲ್ಲಿ ಚಿನ್ನದ ಅಂಕ ಪಡೆದು ತೇರ್ಗಡೆ ಆಗಿ ತನ್ನ ಶ್ರೇಷ್ಠತೆಯನ್ನು ಸಾಬೀತುಪಡಿಸುತ್ತಿದೆ. ಆದರೆ ಇವತ್ತು ಗೋವನ್ನು ತಿರಸ್ಕೃತ ದೃಷ್ಟಿಯಿಂದ ನೋಡಲಾಗುತ್ತಿದೆ. ಆದರೆ ಅದು ನೋಡುವ ಕಣ್ಣಿನ ದೋಷವೇ ಹೊರತು ಗೋಮಾತೆಯದ್ದಲ್ಲ ಎಂದು ಶ್ರೀರಾಮಚಂದ್ರಾಪುರ ಮಠಾಧೀಶ ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.
ಬೆಂಗಳೂರಿನ ಗಿರಿನಗರದ ಶ್ರೀರಾಮಚಂದ್ರಾಪುರಮಠದ ಶಾಖಾ ಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶಸಭೆಯಲ್ಲಿ ಮಾತನಾಡಿ, ಭಾರತ ಎಂದಿಗೂ ಕೊಡುವ ದೇಶವಾಗಿತ್ತು, ಬೇಡುವ ದೇಶ ಅಲ್ಲ. ರಾಸಾಯನಿಕ ಉಪಯೋಗಿಸಿ ಭೂಮಿಯನ್ನು ಬಂಜರು ಮಾಡಲಾಯಿತು. ಇದರಿಂದ ರೈತ ಬಂಜರು, ಆ ರಾಸಾಯನಿಕಯುಕ್ತ ಬೆಳೆಗಳನ್ನು ತಿಂದವರು ಬಂಜರು, ಈ ಮಟ್ಟದಲ್ಲಿ ರಾಸಾಯನಿಕ ಉಪಯೋಗ ಆದರೆ ಗೋವು ಕೂಡ ತಿರಸ್ಕೃತವಾಗುತ್ತದೆ ಎಂದರು.
ಈಗಿನ ಕಾಲದಲ್ಲಿ ಆಹಾರ ಧಾನ್ಯಗಳನ್ನು ಆಮದು ಮಾಡುವ ಪರಿಸ್ಥಿತಿ ಉಂಟಾಗಿದೆ. ನಾವು ಮತ್ತೆ ಗೋವನ್ನು ಉಪಯೋಗಿಸ ತೊಡಗಿದರೆ ನಾವು ಮತ್ತೆ ಕೊಡುವವರು ಆಗುತ್ತೇವೆ, ಗೋಮಾತೆ ಮತ್ತು ಭೂಮಾತೆಯನ್ನು ಒಂದುಗೂಡಿಸಬೇಕಾದ ಅನಿವಾರ್ಯತೆ ಇದೆ. ಅದಕ್ಕಾಗಿ ನಾಡನ್ನು ಆಳುವವರು, ವಿಜ್ಞಾನಿಗಳು ಈ ಬಗ್ಗೆ ಗಮನಹರಿಸಬೇಕು. ಗೋವನ್ನು ಮತ್ತೆ ಮತ್ತೆ ಪರೀಕ್ಷೆ ಮಾಡಬೇಡಿ, ಸಮಾಜ ಗೋವನ್ನು ಒಪ್ಪಿಕೊಳ್ಳಬೇಕು ಎಂದು ಕರೆನೀಡಿದರು.
ಬೆಂಗಳೂರು ಮಾಗಡಿ ರಸ್ತೆ, ಶ್ರೀರಾಮಕೃಷ್ಣ ಓಂಕಾರಾಶ್ರಮದ, ಸ್ವಾಮಿ ಶಾಂತಾನಂದಜಿ ತಮ್ಮ ಗೋ ಸಂದೇಶದಲ್ಲಿ, ಪರಮಪೂಜ್ಯ ರಾಘವೇಶ್ವರ ಶ್ರೀಗಳು ಗೋವಿನ ಕುರಿತಾದ ಮಹತ್ವವನ್ನು ಹರಡುವಲ್ಲಿ ವಿಶೇಷವಾಗಿ ದಿಗ್ದರ್ಶನ ಮಾಡುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದೇ ಒಂದು ಸೌಭಾಗ್ಯ. ದೇಶಿ ತಳಿಗಳಿಂದ ಧನಾತ್ಮಕ ಶಕ್ತಿ ಲಭಿಸುತ್ತದೆ ಎಂದು ವೈಜ್ಞಾನಿಕವಾಗಿ ಧೃಡಪಟ್ಟಿದೆ. ಹಾಗಾಗಿ ಗೋಸಂರಕ್ಷಣೆಯ ಮಹತ್ಕಾರ್ಯದಲ್ಲಿ ಭಾಗಿಗಳಾಗೋಣ ಎಂದರು.
ಗೋ ಸೇವೆ ಮಾಡಿದವರನ್ನೇ ಚಿಕಿತ್ಸೆ ಮಾಡುವ ಮೂಲಕ ಗೋ ಸೇವೆಯ ಮಹತ್ವವನ್ನು ಸಾರುತ್ತಿರುವ ಡಾ. ವಿಜಯಲಕ್ಷ್ಮೀ ಮತ್ತು ಡಾ. ಗಣೇಶ್ ಕುಮಾರ್ ದಂಪತಿಗಳಿಗೆ ಗೋ ಸೇವಾ ಪುರಸ್ಕಾರವನ್ನು ನೀಡಲಾಯಿತು.
ಶ್ರೀಭಾರತೀಪ್ರಕಾಶನ ಹೊರತಂದ ಸಾಧನಾಪಂಚಕ ಪ್ರವಚನಮಾಲಿಕೆಯ ವಿ.ಸಿ.ಡಿಯನ್ನು ಸ್ವಾಮಿ ಶಾಂತಾನಂದಜಿ ಹಾಗೂ "ಗೋ-ಸಂಪ್ರದಾಯಗೀತೆ" ಭಾಗ 2 ಧ್ವನಿಮುದ್ರಿಕೆಯನ್ನು ರಾಘವೇಶ್ವರ ಶ್ರೀಗಳು ಲೋಕಾರ್ಪಣೆ ಮಾಡಿದರು.
ವರಮಹಾಲಕ್ಷ್ಮಿ ವ್ರತದ ಪ್ರಯುಕ್ತ ವಿಶೇಷ ಪೂಜೆ ನಡೆಯಿತು. ಬಳೆ ತೊಡುವುದರ ಮಹತ್ವದ ಕುರಿತು ಶ್ರೀಮತಿ ಚಂಪಾರಾಣಿ ಮಾಹಿತಿ ನೀಡಿದರು. ನಂತರ ಬಳೆಗಾರ ಜಾನಪದ ಶೈಲಿಯಲ್ಲಿ ಬಳೆಯನ್ನು ತೊಡಿಸುವ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಭಾಗವಹಿಸಿದರು.
ಬೆಂಗಳೂರು ಯಲಹಂಕದ ಕೆ. ಟಿ. ಶ್ರೀರಾಮ ಕುಟುಂಬದವರು ಸರ್ವಸೇವೆಯನ್ನು ನೆರವೇರಿಸಿದರು. ಶ್ರೀಮಠದ ಪದಾಧಿಕಾರಿಗಳು, ಚಾತುರ್ಮಾಸ್ಯ ಸಮಿತಿಯ ಸದಸ್ಯರು ಇದ್ದರು. ಎಸ್. ಜಿ ಭಟ್ ನಿರೂಪಿಸಿದರು. ಉದಯನಾರಾಯಣ ಭಟ್ ದಂಪತಿಗಳು ಸಭಾಪೂಜೆ ನೆರವೇರಿಸಿದರು. ಅನಂತರ ಕುಮಾರಿ ಹರ್ಷಿತಾ ಬಳಗದವರಿಂದ ಗಾಯನ ಕಾರ್ಯಕ್ರಮ ನಡೆಯಿತು.
ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ರಾಮತಾರಕ ಹವನ, ಶ್ರೀದುರ್ಗಾಪೂಜೆ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ನಡೆಯಿತು.