ಬೆಂಗಳೂರು : ರಕ್ತ ನೋವಿನಿಂದ ಬರುವಂತದ್ದಾಗಿದ್ದು, ಹಾಲು ಪ್ರೀತಿಯಿಂದ ಬರುವಂತದ್ದಾಗಿದೆ. ಗೋವಿನಿಂದ ಬಂದ ಆಹಾರವನ್ನು ಸೇವಿಸಬೇಕು, ಹೊರತಾಗಿ ಗೋವನ್ನೇ ಸೇವಿಸಬಾರದು ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ನುಡಿದರು.
ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶ ಸಭೆಯಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು, ವೀಗನಿಸಮಂನಲ್ಲಿ ಗೋವಿನ ಹಾಲನ್ನೂ ಕುಡಿಯಬಾರದು ಎಂದು ಪ್ರತಿಪಾದಿಸಲಾಗುತ್ತದೆ. ಹಾಲನ್ನು ಕುಡಿಯುವುದು ಕರುವಿಗೆ ಮೋಸ ಮಾಡಿದಂತೆ ಹಾಗೂ ಹಾಲಿನ ಉದ್ಯಮವೇ ಮಾಂಸೋದ್ಯಮಕ್ಕೆ ಪ್ರೇರಣೆ ಎಂದು ವೀಗನಿಸಂನವಾದ. ಆದರೆ ಗೋವಿಗೆ ಹಿಂಸೆ ಮಾಡದೇಯೇ ಪ್ರೀತಿಂದ ಹಾಲನ್ನು ಪಡೆದರೆ ಅದು ಹಿಂಸೆ ಆಗಲಾರದು, ಅಂತೆಯೇ ಭಾರತೀಯ ತಳಿಗಳಲ್ಲಿ ಕರುವಿಗಾಗಿ ಹಾಲನ್ನು ಉಳಿಸಿಕೊಳ್ಳುವ ವಿಶಿಷ್ಟ ಶಕ್ತಿ ಇದೆ ಎಂದು ಹೇಳಿದರು. ಹಾಗೆಯೆ ಹಾಲನ್ನು ನೆಚ್ಚಿಕೊಂಡು ಗೋವನ್ನು ಸಾಕಬಾರದು, ಸರಿಯಾಗಿ ಗಮನಿಸಿದರೆ, ಹಾಲು ಗೋವಿನ ಉಪ ಉತ್ಪನ್ನ, ಗೋಮಯ ಗೋಮೂತ್ರಗಳು ಹಾಲಿನ ಪ್ರಮುಖ ಉತ್ಪನ್ನ. ಈ ದೃಷ್ಟಿಯಲ್ಲಿ ನೋಡಿದರೆ ವೀಗನಿಸಂನಲ್ಲಿ ಹಾಲನ್ನು ಸೇವಿಸಬಾರದು ಎಂದು ಹೇಳಿರುವುದಕ್ಕೆ ಪರಿಹಾರ ಸಿಗುತ್ತದೆ ಎಂದರು.
ಇಂದು ಭಾರತ ಬೇರೆಬೇರೆ ಕಾರಣಕ್ಕೆ ವಿಶ್ವದ ಗಮನ ಸೆಳೆಯುತ್ತಿದೆ, ಗೋವಿನಿಂದಾಗಿ ಭಾರತ ವಿಶ್ವದಲ್ಲಿ ಗುರುತಿಸುವಂತಾಗಲಿ ಎಂದು ಹಾರೈಸಿದರು.
ಕೊಳ್ಳೇಗಾಲದ ನಂದೀಶ ಶಿವಾಚಾರ್ಯ ಸ್ವಾಮಿಗಳು ಸಂತಸಂದೇಶ ನೀಡಿ, ಎಲ್ಲೆಡೆಯೂ ಗೋಜಾಗೃತಿ ಅವಶ್ಯವಾಗಿದ್ದು, ಈದಿಶೆಯಲ್ಲಿ ರಾಘವೇಶ್ವರಶ್ರೀಗಳು ಸಂಕಲ್ಪಿಸಿದ ಗೋಯಾತ್ರೆಯಲ್ಲಿ ಭಾಗವಹಿಸಿ ಗೋಅಭಿಯಾನದಲ್ಲಿ ಭಾಗವಹಿಸೋಣ ಎಂದರು.
ಕೊಳ್ಳೇಗಾಲದ ಶಿವಪ್ರಭು ಸ್ವಾಮಿಗಳು ಸಂತಸಂದೇಶ ನೀಡಿ, ಗೋವು ಮನುಷ್ಯನ ಕೊನೆಯವರೆಗೂ ಸಲಹುತ್ತದೆ, ಗವ್ಯೋತ್ಪನ್ನಗಳನ್ನು ಬಳಸಿ ಹಲವಾರು ಉತ್ಪನ್ನಗಳನ್ನು ಮಾಡಿ ಗೋಜಾಗೃತಿ ಮಾಡುತ್ತಿರುವ ರಾಮಚಂದ್ರಾಪುರಮಠದ ಕಾರ್ಯ ಶ್ಲಾಘನೀಯ ಎಂದರು.
ಹಿಂದೂಪುರದ ಉದಯಸಿಂಹ ಅವರಿಗೆ ಪೂಜ್ಯ ಶ್ರೀಗಳು ಗೋಸೇವಾ ಪುರಸ್ಕಾರವನ್ನು ಅನುಗ್ರಹಿಸಿದರು. ಗೋಸೇವಾ ಪುರಸ್ಕಾರ ಸ್ವೀಕರಿಸಿದ ಉದಯಸಿಂಹ ಅವರು, ಗೋವುಗಳೊಂದಿಗೆ ತಮ್ಮ ಒಡನಾಟವನ್ನು ಹಂಚಿಕೊಂಡರು. ಶ್ರೀಭಾರತೀಪ್ರಕಾಶನವು ಹೊರತಂದ ಭಾರತದ ಆಹಾರ ಸಂಪತ್ತು ಪುಸ್ತಕವನ್ನು ರಾಘವೇಶ್ವರ ಶ್ರೀಗಳು ಹಾಗೂ ಸಾಧನಾಪಂಚಕ ಪ್ರವಚನಮಾಲಿಕೆಯ ದೃಶ್ಯಮುದ್ರಿಕೆಯನ್ನು ಕೊಳ್ಳೇಗಾಲದ ನಂದೀಶ ಶಿವಾಚಾರ್ಯ ಸ್ವಾಮಿಗಳು ಲೋಕಾರ್ಪಣೆ ಮಾಡಿದರು. ಸಭಾಕಾರ್ಯಕ್ರಮದ ನಂತರ ಕಲಾರಾಮ ವೇದಿಕೆಯಲ್ಲಿ ಶೃತಿ ಬೋಡೆ ಯಲ್ಲಾಪುರ ಹಾಗು ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಜಯದೇವ ಎಲೆಕ್ಟ್ರಿಕಲ್ಸ್ ನ ಮಾಲಿಕರು ಶ್ರೀಗಳಿಂದ ಆಶೀರ್ವಾದ ಪಡೆದರು. ಶ್ರೀಮಠದ ಪದಾಧಿಕಾರಿಗಳು, ವಿವಿಧ ಭಾಗಗಳ ಶಿಷ್ಯ ಭಕ್ತರು ಉಪಸ್ಥಿತರಿದ್ದರು. ಎಂದಿನಂತೆ ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.