ನವದೆಹಲಿ : ರಿಯೋ ಒಲಂಪಿಕ್ಸ್ ನಲ್ಲಿ ಸಾಧನೆಗೈದ ಕ್ರೀಡಾಪಟುಗಳಾದ ಪಿ.ವಿ ಸಿಂಧು, ಸಾಕ್ಷಿ ಮಲಿಕ್, ದೀಪಾ ಕರ್ಮಾಕರ್ ಹಾಗೂ ಜೀತು ರಾಯ್ ಅವರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು.
ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ಪಿ.ಸಿಂಧು, ಕುಸ್ತಿ ಪಟು ಸಾಕ್ಷಿ ಮಲಿಕ್, ಜಿಮ್ನಾಸ್ಟ್ ದೀಪಾ ಕರ್ಮಾಕರ್ ಮತ್ತು ಶೂಟರ್ ಜೀತು ರಾಯ್ ಅವರಿಗೆ ಪ್ರಣಬ್ ಮುಖರ್ಜಿ ಅವರು ಖೇಲ್ ರತ್ನ ಪ್ರಶಸ್ತಿ ಪ್ರದಾನ ಮಾಡಿದರು.
ಸಿಂಧು ಅವರ ಬಾಡ್ಮಿಂಟನ್ ಕೋಚ್ ಪುಲ್ಲೇಲ ಗೋಪಿಚಂದ್, ಕನ್ನಡಿಗ ಪ್ರದೀಪ್ ಕುಮಾರ್, ನಾಗಪುರಿ ರಮೇಶ್, ಸಾಗರ್ ಮಲ್ ದಯಾಳ್, ಬಿಶ್ವೇಶ್ವರ ನಂದಿ ಹಾಗೂ ರಾಜ್ ಕುಮಾರ್ ಶರ್ಮ ಇವರಿಗೆ ದ್ರೋಣಾಚಾರ್ಯ ಪ್ರಶಸ್ತಿಗಳನ್ನು ನೀಡಲಾಯಿತು.
ಕ್ರಿಕೆಟಿಗ ಅಂಜಿಕ್ಯ ರೆಹಾನೆ, ಬಾಕ್ಸರ್ ಶಿವಥಾಪ, ಅಥ್ಲೀಟ್ ಲಲಿತಾ ಬಬರ್, ಹಾಕಿ ಆಟಗಾರರಾದ ವಿ.ಆರ್.ರಘುನಾಥ್ ಮತ್ತು ರಾಣಿ ರಾಮ್ಪಾಲ್ ಅರ್ಜುನ ಪ್ರಶಸ್ತಿಗಳನ್ನು ಪಡೆದವರಲ್ಲಿ ಪ್ರಮುಖರಾಗಿದ್ದಾರೆ.
ಸತ್ತಿ ಗೀತಾ (ಅಥ್ಲೆಟಿಕ್), ಸಿಲ್ವನಸ್ ಡುಂಗ್ ಡುಂಗ್ (ಹಾಕಿ) ಹಾಗೂ ರಾಜೇಂದ್ರ ಪ್ರಹ್ಲಾದ್ ಶೆಲ್ನೆ (ರೋಯಿಂಗ್) ಇವರು ಧ್ಯಾನ್ ಚಂದ್ ಜೀವಮಾನ ಸಾಧನೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.