Basavanagudi : ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ಗೋಚಾತುರ್ಮಾಸ್ಯದ ಶುಭ ಸಂದರ್ಭದಲ್ಲಿ ಗಣೇಶ ಚತುರ್ಥಿಯ ನಿಮಿತ್ತ ಶ್ರೀ ರಾಮಚಂದ್ರಾಪುರ ಮಠದ ಬೆಂಗಳೂರಿನ ಶಾಖಾಮಠದಲ್ಲಿ ವಿಶೇಷ ಕಾರ್ಯಕ್ರಮಗಳು ಸಂಪನ್ನವಾಗಲಿದ್ದು, ವಿಶಿಷ್ಟವಾದ ‘ಗೋ-ಗಣಪತಿ’ಯ ಉಪಾಸನೆ ನಡೆಯಲಿದೆ.
ಸಂಪೂರ್ಣ ಗೋಮಯದಿಂದ ತಯಾರಿಸಲಾದ, ಗೋವಿನೊಂದಿಗಿರುವ ಗಣಪತಿಯನ್ನು ಗಣೇಶ ಚತುರ್ಥಿಯಂದು ( ಸೆ. 5) ಧಾರ್ಮಿಕ ವಿಧಿವಿಧಾನಗಳೊಂದಿಗೆ ಪ್ರತಿಷ್ಠಾಪಿಸಿ ಕಲ್ಪೋಕ್ತಪೂಜೆ ನಡೆಯಲಿದ್ದು, ಪೂಜ್ಯ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ಗೋ-ಗಣಪತಿಗೆ ವಿಶೇಷ ಪೂಜೆಯನ್ನು ನೆರವೇರಿಸಲಿದ್ದಾರೆ.
ಧಾರ್ಮಿಕ ವೈವಿಧ್ಯಗಳು:
ಗಣೇಶಚತುರ್ಥಿಯಂದು ಶುಭಮುಹೂರ್ತದಲ್ಲಿ ಗೋ-ಗಣಪತಿಯ ಪ್ರಾಣಪ್ರತಿಷ್ಠೆಯೊಂದಿಗೆ ಕಲ್ಪೋಕ್ತಪೂಜೆ ನೆರವೇರಲಿದ್ದು, ಮಹಾಗಣಪತಿ ಹವನ, ಕ್ಷಿಪ್ರಗಣಪತಿ ಹವನ, ಸಹಸ್ರ ಅಪ್ಪ(ಅಪೂಪ) ಸೇವೆ, ಸಹಸ್ರದೂರ್ವಾಚನೆ, ಅಷ್ಟಾವಧಾನ ಸೇವೆ, ಅಥರ್ವಶೀರ್ಷ ಪಾರಾಯಣ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ನಾಲ್ಕುದಿನಗಳ ಕಾಲ ಗೋ-ಗಣಪತಿಯ ಉಪಾಸನೆ ನೆರವೇರಲಿದೆ.
ಗೋ-ಗಣಪತಿಯ ವೈಶಿಷ್ಟ್ಯ:
ಗೋ-ಗಣಪತಿಯನ್ನು ಸಂಪೂರ್ಣವಾಗಿ ಗೋಮಯವನ್ನು ಮಾತ್ರ ಬಳಸಿ ತಯಾರಿಸಲಾಗಿದ್ದು, ಇದರ ನಿರ್ಮಾಣಕ್ಕೆ ಸುಮಾರು 350 ಕೆ.ಜಿ ದೇಶೀಯ ಹಸುವಿನ ಗೋಮಯವನ್ನು ಬಳಸಲಾಗಿದೆ. ಗೋವಿನೊಂದಿಗೆ ಇರುವ ಗಣಪತಿಯ ಮೂರ್ತಿ ಅಪರೂಪದ್ದಗಿದ್ದು, ಇದಕ್ಕೆ ಯಾವುದೇ ರಾಸಾಯನಿಕ ಬಣ್ಣಗಳನ್ನು ಬಳಸದೇ, ನೈಸರ್ಗಿಕವಾದ ಕೇಸರಿ, ಸುಣ್ಣ ಹಾಗೂ ಶುದ್ಧ ಅರಿಸಿಣ - ಕುಂಕುಮ ಮುಂತಾದವುಗಳನ್ನು ಮಾತ್ರ ಬಳಸಲಾಗಿದೆ.
ಗೋ-ಗಣಪತಿಯು ಪೂಜ್ಯ ಶ್ರೀಗಳ ಗೋಚಾತುರ್ಮಾಸ್ಯಕ್ಕೆ ವಿಶೇಷ ಮೆರುಗನ್ನು ತಂದುಕೊಡಲಿದ್ದು, ಧಾರ್ಮಿಕವಾಗಿ ವಿಶೇಷವಾದ ಮಹತ್ವವನ್ನು ಹೊಂದಿರುವ ಗೋಮಯದಿಂದಲೇ ಸಂಪೂರ್ಣವಾಗಿ ನಿರ್ಮಿಸಿರುವ ಗೋವಿನೊಂದಿಗಿರುವ ಗಣಪತಿಯಾಗಿರುವುದರಿಂದ, ಇದರ ಉಪಾಸನೆ ಇಷ್ಟಾರ್ಥ ಫಲ ನೀಡುತ್ತದೆ. ಪರಿಸರಕ್ಕೆ ಪೂರಕ ಮಾತ್ರವಲ್ಲದೇ, ಸುತ್ತಲಿನ ಪರಿಸರವನ್ನು ಶುದ್ಧಗೊಳಿಸುವ ಶಕ್ತಿಯೂ ಗೋಮಯಕ್ಕಿದ್ದು ಪರಿಸರಸ್ನೇಹಿಯಾಗಿದೆ. ಶ್ರೀಗಳ ಮಾರ್ಗದರ್ಶನದಲ್ಲಿ ಅಶೋಕ ಸಿದ್ದನಕೈ ಹಾಗೂ ಸಂಗಡಿಗರು ವಿಶೇಷ ಪರಿಶ್ರಮದಿಂದ ನಿರ್ಮಿಸಿದ್ದು, ಜಾಗತಿಕ ಮಟ್ಟದಲ್ಲಿ ಗೋಜಾಗೃತಿಯನ್ನು ಮೂಡಿಸುತ್ತಿರುವ ಶ್ರೀರಾಮಚಂದ್ರಾಪುರಮಠವು ‘ಗೋ-ಗಣಪತಿ’ಯ ಮೂಲಕ ಗೋಜಾಗೃತಿ ಹಾಗೂ ಪರಿಸರಪ್ರಜ್ಞೆಯನ್ನೂ ಜನಮಾನಸದಲ್ಲಿ ಮೂಡಿಸುತ್ತಿದೆ.