ಬೆಂಗಳೂರು : ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಕೆ.ಎಸ್.ಟಿ.ಡಿ.ಸಿ) ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್ 1 ರಿಂದ 10 ರವರೆಗೆ ಜಗದ್ವಿಖ್ಯಾತ ಮೈಸೂರು ದಸರಾ ಹಬ್ಬದ ಸಂಭ್ರಮವನ್ನು ಸುವರ್ಣ ರಥದ (Golden Chariot Luxury Train) ಮೂಲಕ ಸವಿಯಲು ವಿಶೇಷ ಪ್ಯಾಕೇಜ್ ಆಯೋಜಿಸಲಾಗಿದೆ.
ಪ್ರವಾಸದ ದರವನ್ನು ಅತ್ಯಂತ ಆಕರ್ಷಕ ಹಾಗೂ ಸ್ಪರ್ಧಾತ್ಮಕ ರೀತಿಯಲ್ಲಿ ಆಯೋಜಿಸಿದ್ದು, 2 ರಾತ್ರಿ ಮತ್ತು 1 ದಿನದ ಪ್ಯಾಕೇಜ್ಗೆ ಒಬ್ಬ ವ್ಯಕ್ತಿಗೆ ರೂ. 30,000/- ಗಳನ್ನು ನಿಗದಿಪಡಿಸಲಾಗಿದೆ. ಈ ಪ್ರವಾಸವು ಅಕ್ಟೋಬರ್ 1 ರಿಂದ ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಿಂದ ಚಾಲನೆಗೊಂಡ ದಿನ ಬಿಟ್ಟು ದಿನ ಅಂದರೆ, ಅಕ್ಟೋಬರ್ 3, 5, 7 ಮತ್ತು 9 ರ ದಿನಾಂಕಗಳಂದು ಆಯೋಜಿಸಲಾಗಿದೆ.
ಸುವರ್ಣ ರಥದಲ್ಲಿ ಒಟ್ಟು 44 ಐಷಾರಾಮಿ ಕ್ಯಾಬಿನ್ಗಳಿದ್ದು, 88 ಪ್ರವಾಸಿಗರಿಗೆ ಪ್ರಯಾಣಿಸಲು ಅವಕಾಶವಿರುತ್ತದೆ. ಸೀಟುಗಳನ್ನು ವೆಬ್ಸೈಟ್ www.goldenchariot.org ನಲ್ಲಿ ಆನ್ಲೈನ್ ಮುಖಾಂತರ ಕಾಯ್ದಿರಿಸಬಹುದಾಗಿದೆ. ಪ್ರವಾಸಿಗರು ಸೀಟುಗಳನ್ನು Bookmyshow & Makemytrip ಮೂಲಕವೂ ಕಾಯ್ದಿರಿಸಬಹುದಾಗಿದೆ.
ಈ ರೈಲಿನಲ್ಲಿ ಪ್ರಯಾಣಿಸುವ ಪ್ರವಾಸಿಗರಿಗೆ ಪಂಚತಾರ ಸೌಲಭ್ಯಗಳೊಂದಿಗೆ ಮೈಸೂರು ದಸರಾ ಹಬ್ಬದ ವಿಭಿನ್ನ ಅನುಭವ ದೊರಕುವುದು. ಪ್ರವಾಸ ಹೊರಡುವ ದಿನ ಎಲ್ಲಾ ಅತಿಥಿಗಳು ಬೆಂಗಳೂರಿನ ‘ತಾಜ್ ವೆಸ್ಟ್ ಎಂಡ್’ ಹೋಟೆಲಿನಲ್ಲಿ ಬಂದು ಸೇರಿ ಹೈ ಟೀ ನಂತರ ಯಶವಂತಪುರಕ್ಕೆ ಅವರನ್ನು ಕರೆದುಕೊಂಡು ಹೋಗಲಾಗುವುದು. ಅಲ್ಲಿ ಅವರಿಗೆ ಮೈಸೂರು ಶೈಲಿ ಸಾಂಪ್ರದಾಯಿಕ ಸ್ವಾಗತ ನೀಡಿ ಸುವರ್ಣ ರಥಕ್ಕೆ ಆಹ್ವಾನಿಸಲಾಗುವುದು.
ದಕ್ಷಿಣ ಭಾರತದ ಏಕೈಕ ಐಷಾರಾಮಿ ರೈಲು ಎನಿಸಿರುವ ಸುವರ್ಣ ರಥವು ವಿಶೇಷವಾಗಿ ವಿನ್ಯಾಸಗೊಳಿಸಿದ 18 ಕೋಚ್ಗಳನ್ನು ಒಳಗೊಂಡಿದೆ. ಅದರಲ್ಲಿ ಸುಂದರವಾಗಿ ಅಲಂಕಾರಗೊಂಡ ಎರಡು ರೆಸ್ಟೋರೆಂಟ್ ಇದ್ದು, ಅತಿಥಿಗಳಿಗೆ ವಿಭಿನ್ನ ತಿಂಡಿ-ತಿನಿಸುಗಳ ಮೂಲಕ ರಸದೌತಣ ನೀಡಲಿದೆ. ಹಾಗೆಯೇ ಈ ರೈಲಿನಲ್ಲಿ ಆಕರ್ಷಕವಾಗಿ ವಿನ್ಯಾಸಗೊಳಿಸಿದ ಬಾರ್, ಜಿಮ್ ಮತ್ತು ಸ್ಪಾ ಸೌಲಭ್ಯಗಳಿರುತ್ತವೆ. ರಾತ್ರಿ ಯಶವಂತಪುರದಿಂದ ಹೊರಡುವ ರೈಲು ಮೈಸೂರು ತಲುಪುತ್ತದೆ. ಮರುದಿನ ಬೆಳಿಗ್ಗೆ ಗೋಲ್ಡೆನ್ ಚಾರಿಯೇಟ್ ರೈಲಿನಲ್ಲಿ ಬೆಳಗಿನ ಉಪಹಾರ ನಂತರ ಅತಿಥಿಗಳನ್ನು ಕೆ.ಎಸ್.ಟಿ.ಡಿ.ಸಿ. ಲಕ್ಷುರಿ ಬಸ್ಸುಗಳಲ್ಲಿ ಕರೆದೊಯ್ದು ಶ್ರೀರಂಗಪಟ್ಟಣದ ಪಾರಂಪರಿಕ ಸ್ಮಾರಕಗಳಾದ ದರಿಯಾ ದೌಲತ್, ಟಿಪ್ಪು ಸಮಾಧಿ ಮತ್ತು ಕೋಟೆಗಳನ್ನು ಪರಿಚಯಿಸಿ ವಾಪಸ್ಸು ಮೈಸೂರಿಗೆ ಕರೆದುಕೊಂಡು ಬರಲಾಗುವುದು.
ಮೈಸೂರಿನಲ್ಲಿ ಪ್ರಸಿದ್ಧ ಜಗನ್ಮೋಹನ ಅರಮನೆಯ ಭೇಟಿ ಮುಗಿಸಿ ಲಲಿತ ಮಹಲ್ ಪ್ಯಾಲೇಸ್ನಲ್ಲಿ ಮಧ್ಯಾಹ್ನದ ಭೂರಿ ಭೋಜನದೊಂದಿಗೆ ಸತ್ಕರಿಸಲಾಗುವುದು. ನಂತರ ಜಾನಪದ ಸಂಗ್ರಹಾಲಯ, ಜಯಲಕ್ಷ್ಮಿ ವಿಲಾಸ್ ಮ್ಯಾನಷನ್ ಮತ್ತು ಮೈಸೂರು ವಿಶ್ವವಿದ್ಯಾಲಯದ ಶತಮಾನೋತ್ಸವ ಗಡಿಯಾರ ಗೋಪುರವನ್ನು ವೀಕ್ಷಿಸಿ, ಸಂಜೆ ಸುಪ್ರಸಿದ್ಧ ಮ್ಯಸೂರು ಅರಮನೆಗೆ ಕೊಂಡೊಯ್ಯಲಾಗುವುದು.
ಕೆ.ಎಸ್.ಟಿ.ಡಿ.ಸಿ. ಯು ಮೈಸೂರಿನ ಪ್ರಸಿದ್ದ ಮೈಸೂರು ರಾಯಲ್ “ವಾಕ್ಸ್” ಸಹಯೋಗದೊಂದಿಗೆ ಪಾರಂಪರಿಕ ನಡಿಗೆಯ ಅನುಭವವನ್ನು ಮೈಸೂರು ಅರಮನೆಯ ಆವರಣದಲ್ಲಿ ಪರಿಚಯಿಸಲಿದೆ.
ದಸರಾ ಸಾಂಸ್ಕೃತಿಕ ವೈಭವ ವನ್ನು ಪ್ರತಿಬಿಂಬಿಸುವ ಅರಮನೆ ಮುಂಭಾಗದಲ್ಲಿ ಸಂಜೆ ಸಾಂಸ್ಕøತಿಕ ಕಾರ್ಯಕ್ರಮವನ್ನು ಗೋಲ್ಡ್ ಪಾಸ್ ಸೌಲಭ್ಯದೊಂದಿಗೆ ವೀಕ್ಷಿಸಲು ಅನುವು ಮಾಡಿಕೊಡಲಾಗುವುದು. ಮನಸೂರೆಗೊಳ್ಳುವ ಸಾಂಸ್ಕøತಿಕ ಸಿರಿಯನ್ನು ಕಣ್ತುಂಬಿಕೊಂಡ ನಂತರ ಅತಿಥಿಗಳನ್ನು ವಾಪಸ್ಸು ಸುವರ್ಣ ರಥಕ್ಕೆ ಕೊಂಡೊಯ್ಯಲಾಗುವುದು. ರಾತ್ರಿಯ ವಿಶೇಷ ಭೋಜನವನ್ನು ರೈಲಿನಲ್ಲಿ ಮುಗಿಸಿ ಬೆಂಗಳೂರಿನ ಕಡೆ ಪ್ರಯಾಣ ಬೆಳೆಸಿ ಮರುದಿನ ಬೆಳಿಗ್ಗೆ ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಹಿಂದಿರುಗಿ ಕರೆತರಲಾಗುವುದು.