ವಿಯೆಂಟಿಯಾನ್ : ಭಯೋತ್ಪಾದನೆ ರಫ್ತು, ಹೆಚ್ಚುತ್ತಿರುವ ತೀವ್ರಗಾಮಿ ಧೋರಣೆಗಳ ವಿರುದ್ಧ ಕಿಡಿಕಾರಿರುವ ಪ್ರಧಾನಿ ನರೇಂದ್ರ ಮೋದಿ, ಭಯೋತ್ಪಾದನೆ ರಫ್ತು ಪಿಡುಗಿನ ವಿರುದ್ಧ ಸಂಘಟಿತ ಹೋರಾಟದ ಅಗತ್ಯವಿದೆ ಎಂದು ಆಸಿಯಾನ್ ರಾಷ್ಟ್ರಗಳಿಗೆ ಕರೆ ನೀಡಿದ್ದಾರೆ.
ಲಾವೋಸ್ ನ ರಾಜಧಾನಿ ವಿಯೆಂಟಿಯಾನ್ ನಡೆಯುತ್ತಿರುವ 14 ನೇ ಆಸಿಯಾನ್ ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಅಂತರರಾಷ್ಟ್ರೀಯ ವೇದಿಕೆಯಲ್ಲಿ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ. ಪಾಕಿಸ್ತಾನದಿಂದ ಭಯಂಕರ ಭಯೋತ್ಪಾಧನೆ ರಫ್ತು ಆರಂಭವಾಗಿದ್ದು, ಇದು ಆಸಿಯಾನ್ ದೇಶಗಳ ಸಾಮಾನ್ಯ ಭದ್ರತೆಗೂ ಮಾರಕವಾಗಿದೆ. ಈ ನಿಟ್ಟಿನಲ್ಲಿ ಭಯೋತ್ಪಾದನೆ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕಿದೆ ಎಂದು ತಿಳಿಸಿದರು.
ಬಹುಮಟ್ಟಗಳಲ್ಲಿ ಸಮನ್ವಯತೆ, ಸಹಕಾರದ ಮೂಲಕ ಈ ಹಾವಳಿಯನ್ನು ನಿಗ್ರಹಿಸಲು ಆಸಿಯಾನ್ ದೇಶಗಳು ಸಂಘಟಿತ ಪ್ರಯತ್ನ ನಡೆಸಬೇಕೆಂದ ಮೋದಿ, ಸೈಬರ್ ಭದ್ರತೆಯನ್ನು ಹೆಚ್ಚಿಸಲು ಹಾಗೂ ಭಯೋತ್ಪಾದನೆಯನ್ನು ದಮನ ಮಾಡಲು ನಾವು ಸದೃಢವಾದ ಹೆಜ್ಜೆಗಳನ್ನಿಡಬೇಕಿದೆ ಎಂದು ಹೇಳಿದರು.
ಇದಕ್ಕೂ ಮೊದಲು ಪ್ರಧಾನಿ ಮೋದಿ,ಲಾವೋಸ್ನ ಥೊಂಗ್ಲೌನ್ ಸಿಸೌಲಿಥ್ ಅವರೊಂದಿಗೆ ದ್ವಿಪಕ್ಷೀಯ ವಿಷಯಗಳ ಕುರಿತು ಸಮಾಲೋಚನೆ ನಡೆಸಿದರು. ದಕ್ಷಿಣ ಚೀನಾ ಸಮುದ್ರ ವಿಚಾರ ಒಳಗೊಂಡಂತೆ ಪ್ರಾದೇಶಿಕ ವಿಷಯಗಳ ಕುರಿತು ಚರ್ಚೆ ನಡೆಸಿದರು.ಇನ್ನು ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.