ಬೆಂಗಳೂರು : ತಮಿಳುನಾಡಿಗೆ ಕಾವೇರಿ ನದಿ ನೀರು ಬಿಟ್ಟಿರುವುದನ್ನು ಖಂಡಿಸಿ ಕರ್ನಾಟಕದಲ್ಲಿ ಬಂದ್ ಆಚರಿಸಲಾಗುತ್ತಿದ್ದು, ಪ್ರತಿಭಟನೆಗಳು ತೀವ್ರಸ್ವರೂಪ ಪಡೆದುಕೊಂಡಿದ್ದು, ಮೂವರು ಹೋರಾಟಗಾರರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ ಕಾರ್ಯಕರ್ತನೊಬ್ಬ ಹೊಟ್ಟೆಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ವಿವಿಧ ಕನ್ನಡಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾಗ ಏಕಾಏಕಿ ಪ್ರಭು ಚೋಳನಪಾಳ್ಯ ಎಂಬ ಯುವಕ ಹೊಟ್ಟೆಕೊಯ್ದುಕೊಂಡ. ಹೊಟ್ಟೆಯಿಂದ ರಕ್ತ ಸುರಿಯುತ್ತಿದ್ದರೂ ಕಾವೇರಿಗಾಗಿ ರಕ್ತಕೊಡಲು ಸಿದ್ದ ಎಂದು ಘೋಷಣೆ ಕೂಗತೊಡಗಿದ. ತಕ್ಷಣ ಪ್ರತಿಭಟನಾಕಾರರು ಹಾಗೂ ಪೊಲೀಸರು ಆತನನ್ನು ಆ್ಯಂಬೆಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಮಧ್ಯೆ ಮೈಸೂರಿನ ಕೆಆರ್ಎಸ್ ಸಮೀಪ ಪ್ರತಿಭಟನೆ ನಡೆಸುತ್ತಿದ್ದ ರೈತನೊಬ್ಬ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಆತನನ್ನು ಪೊಲೀಸರು ರಕ್ಷಿಸಿದ್ದಾರೆ. ಈ ನಡುವೆ ಮಂಡ್ಯದಲ್ಲಿ ಕರವೇ ಕಾರ್ಯಕರ್ತನೊಬ್ಬ ಕೈ ಕೊಯ್ದುಕೊಳ್ಳುವ ಮೂಲಕ ಸರ್ಕಾರದ ವಿರುದ್ಧ ತನ್ನ ಆಕ್ರೋಶ ಹೊರಹಾಕಿದ್ದಾನೆ.
ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ರೈತರು ಕೆಆರ್ಎಸ್ ಆಣೆಕಟ್ಟಿಗೆ ಮುತ್ತಿಗೆ ಹಾಕಲು ಯತ್ನಿಸಿದ ವೇಳೆ ಲಾಠಿ ಜಾರ್ಜ್ ಹಾಗೂ ಅಶ್ರುವಾಯು ಸಿಡಿಸಿದರು. ಸಾವಿರಾರು ಸಂಖ್ಯೆಯ ರೈತರು ಪೊಲೀಸರು ಹಾಕಿದ್ದ ಬ್ಯಾರಿಕೇಡ್ಗಳನ್ನು ಮುರಿದು ಹಾಕಿ ಅಣೆಕಟ್ಟೆಗೆ ಮುತ್ತಿಗೆ ಹಾಕಲು ಮುಂದಾಗುತ್ತಿದ್ದಂತೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅನಿವಾರ್ಯವಾಗಿ ಲಾಠಿ ಪ್ರಹಾರ ಮಾಡಿದರು.
ಇನ್ನು ಕರ್ನಾಟಕ ಬಂದ್ಗೆ ಸ್ಯಾಂಡಲ್ವುಡ್ ಕೂಡ ಸಾಥ್ ನೀಡಿದ್ದು, ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಸಮಾವೇಶಗೊಂಡ ಚಲನಚಿತ್ರ ದಿಗ್ಗಜರು, ಸುಪ್ರೀಂಕೋರ್ಟ್ ತೀರ್ಪು ವಿರೋಧಿಸಿ ಕೇಂದ್ರ ಹಾಗೂ ರಾಜ್ಯಸರ್ಕಾರದ ಧೋರಣೆಗಳನ್ನು ಖಂಡಿಸಿ ಪ್ರತಿಭಟನೆ ನಡೆಸಿ ಜೀವಜಲ ಕಾವೇರಿ ಉಳಿಸಬೇಕೆಂದು ಆಗ್ರಹಿಸಿದರು.
ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ನೇತೃತ್ವದಲ್ಲಿ ಹಿರಿಯ ನಟಿಯರಾದ ಲೀಲಾವತಿ, ಭಾರತಿ ವಿಷ್ಣುವರ್ಧನ್,ಪದ್ಮ ವಾಸಂತಿ, ನಟರಾದ ಶಿವರಾಜ್ಕುಮಾರ್, ಉಪೇಂದ್ರ,ದೇವರಾಜ್, ಅಜಯ್ರಾವ್, ಅನಿರುದ್ಧ್, ಶರಣ್, ವಿನೋದ್ರಾಜ್,ಶೃತಿ, ಲತಾ, ರಚಿತಾರಾಮ್, ತಾರಾ, ಹರಿಪ್ರಿಯ, ಸಂಗೀತ ನಿರ್ದೇಶಕ ಹಂಸಲೇಖ ಸೇರಿದಂತೆ ಕನ್ನಡ ಚಿತ್ರರಂಗದ ಹಲವರು ಪ್ರತಿಭಟನೆಯಲ್ಲಿ ಭಾಗವಿಸಿದರು.