ನವದೆಹಲಿ : ತಮಿಳುನಾಡಿಗೆ ಪ್ರತಿದಿನ 12 ಕ್ಯೂಸೆಕ್ ನೀರಿನಂತೆ ಸೆ.20ರವರೆಗೆ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಈ ಮೂಲಕ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಗಿದ್ದು, ರಾಜ್ಯದಲ್ಲಿ ಪ್ರತಿಭಟನೆ ಮತ್ತೆ ಭುಗಿಲೇಳಲಿದೆ.
ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ್ದ ಆದೇಶವನ್ನು ಪುನರ್ ಪರಿಶೀಲಿಸುವಂತೆ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಹಾಗೂ ಉದಯ್ ಲಲಿತ್ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠ, ಉಭಯ ರಾಜ್ಯಗಳ ಪರ ವಕೀಲರ ವಾದ-ಪ್ರತಿವಾದ ಆಲಿಸಿತು.
ಅರ್ಜಿ ವಿಚಾರಣೆ ವೇಳೆ ಕರ್ನಾಟಕ ಪರ ವಾದ ಮಂಡಿಸಿದ ಹಿರಿಯ ವಕೀಲ ಪಾಲಿ ನಾರಿಮನ್, ಕರ್ನಾಟಕದಲ್ಲಿ ಸಂಕಷ್ಟ ಪರಿಸ್ಥಿತಿ ನಿರ್ಮಾಣವಾಗಿದ್ದು ನಾಲ್ಕು ಡ್ಯಾಂಗಳಲ್ಲಿ 34 ಟಿಎಂಸಿ ಯಷ್ಟು ಮಾತ್ರ ನೀರಿದೆ.ಅಲ್ಲದೆ ವೆಟ್ಟೂರು ಜಲಾಶಯದಲ್ಲಿ 42. 4 ಟಿಎಂಸಿ ಯಷ್ಟು ನೀರಿದ್ದು ತಮಿಳುನಬಾಡಿಗೆ ಯಾವುದೇ ಸಮಸ್ಯೆ ಇಲ್ಲ.ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಜತೆಗೆ ನೀರಿನ ಸಮಸ್ಯೆಯು ಹೆಚ್ಚಾಗಿದೆ ಎಂದು ಸ್ಪಷ್ಟನೆ ನೀಡಿದರು.
ಅಲ್ಲದೆ ಕರ್ನಾಟಕದಲ್ಲಿ ಈಗಾಗಲೇ ಮಾನ್ಸೂನ್ ಮುಗಿದಿದೆ. ತಮಿಳುನಾಡಿನಲ್ಲಿ ಮಾನ್ಸೂನ್ ಆರಂಭವಾಗಿದ್ದು,ಪ್ರಭಲವಾಗಿ ಮಳೆಯಾಗಲಿದೆ ಎಂದು ಕರ್ನಾಟಕದ ಸ್ಥಿತಿಯನ್ನು ಮನವರಿಗೆ ಮಾಡಿದರು.
ಈ ನಡುವೆ ತಮಿಳುನಾಡಿನ ಪರ ವಾದ ಮಂಡಿಸಿದ ಶೇಖರ್ ನಫಾಡೆ, ಕಾವೇರಿ ನದಿ ನೀರಿನ ಆದೇಶವನ್ನು ಮಾರ್ಪಾಡಿಸಲು ಕರ್ನಾಟಕ ಏಕಪಕ್ಷೀಯ ನಿರ್ಧಾರಕ್ಕೆ ಮುಂದಾಗಿದೆ ಕಾವೇರಿ ನದಿ ನೀರು ಎರಡು ರಾಜ್ಯಗಳಿಗೂ ಸಮಾನವಾಗಿ ಹಂಚಿಕೆಯಾಗಬೇಕು ಎಂದು ವಾದ ಮಂಡಿಸಿದರು.
ಕರ್ನಾಟ ಹಾಗೂ ತಮಿಳುನಾಡು ಉಭಯ ರಾಜ್ಯಗಳ ವಾದ ಆಲಿಸಿದ ಬಳಿಕ ಆದೇಶ ಪ್ರಕಟಿಸಿದ ನ್ಯಾಯಾಲಯ, ತಮಿಳುನಾಡಿಗೆ ಪ್ರತಿ ದಿನ 12 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚನೆ ನೀಡಿತು. ಮುಂದಿನ ವಿಚಾರಣೆಯನ್ನು ಸೆ.20ಕ್ಕೆ ಮುಂದೂಡಲಾಯಿತು.