ಬೆಂಗಳೂರು : ವಿಕಲಚೇತನರು ಹಾಗೂ ನಾಗರೀಕರು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಇನ್ನು ಮುಂದೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಪಡೆಯುವಂತ ಮಹತ್ವದ ತಂತ್ರಾಂಶವನ್ನು ಜಾರಿಗೆ ತರಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.
ವಿಕಲಚೇತನರ ಹಾಗೂ ಹಿರಿಯ ನಾಗರೀಕ ಸಬಲೀಕರಣ ಇಲಾಖೆ ವಿಕಾಸಸೌಧದಲ್ಲಿ ಏರ್ಪಡಿಸಿದ್ದ ಇಲಾಖೆವತಿಯಿಂದ ಅನುಷ್ಟಾನಗೊಳ್ಳುತ್ತಿರುವ ಯೋಜನೆಗಳ ಆನ್ಲೈನ್ ತಂತ್ರಾಂಶಗಳ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು ಈ ಯೋಜನೆಯಡಿ ಫಲಾನುಭವಿ ಆಧಾರಿತ ಇಪ್ಪತ್ತ ನಾಲ್ಕು ಯೋಜನೆಗಳ ಮಾಹಿತಿಗಳನ್ನು ಅಳವಡಿಸಲಾಗಿದ್ದು ಈ ಎಲ್ಲಾ ಯೋಜನೆಗಳನ್ನು ಫಲಾನುಭವಿಗಳು ಹೇಗೆ ಪಡೆಯಬಹುದು ಎಂಬುದರ ಮಾಹಿತಿಗಳನ್ನು ಈ ತಂತ್ರಾಂಶದಲ್ಲಿ ಅಳವಡಿಸಲಾಗಿದೆ ಎಂದರು.
ವಿಕಲಚೇತನರು ತಮಗೆ ಮೀಸಲಿರಿಸುವ ಯೋಜನಗೆಗಳ ಸೌಲಭ್ಯ ಪಡೆಯಲು ಇನ್ನು ಮುಂದೆ ಜಿಲ್ಲಾ ಕಚೇರಿಗಳಿಗೆ ಹೋಗುವ ಅಗತ್ಯ ಇಲ್ಲ, ತಾವಿರುವ ಸ್ಥಳದಿಂದಲೇ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದ ಸಚಿವರು ಇದರಿಂದ ಫಲಾನುಭವಿಗಳ ಸಮಯ ಹಾಗೂ ಶ್ರಮ ಕಡಿಮೆಯಾಗುತ್ತದೆ ಎಂದರು.
ಪ್ರಸಕ್ತ ಸಾಲಿನಿಂದ ಎಲ್ಲಾ ಇಪ್ಪತ್ತನಾಲ್ಕು ಯೋಜನೆಯಡಿ ಸಿಗುವ ಸೌಲಭ್ಯ ಪಡೆಯಲು ಆನ್ಲೈನ್ ಮೂಲಕವೇ ಅರ್ಜಿಗಳನ್ನು ಸಲ್ಲಿಸಲು ಕ್ರಮವಹಿಸಲಾಗಿದ್ದು, ಈ ಸಂಬಂಧ ಎಲ್ಲಾ ಜಿಲ್ಲಾ ಕಚೇರಿ ಸಿಬ್ಬಂದಿಗಳಿಗೆ ಎರಡು ದಿನಗಳ ಮತ್ತು ಸ್ವಯಂ ಸೇವಾ ಮುಖ್ಯಸ್ಥರುಗಳಿಗೆ ಯೋಜನವಾರು ನಾಲ್ಕು ದಿನಗಳ ತರಬೇತಿಯನ್ನು ಇಲಾಖಾ ವತಿಯಿಂದ ನೀಡಲಾಗುವುದು ಎಂದು ಸಚಿವೆ ಉಮಾಶ್ರೀ ಅವರು ತಿಳಿಸಿದರು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಇಂತಹ ಸೇವಾ ಕೇಂದ್ರಗಳಿದ್ದು ಅರ್ಹ ಫಲಾನುಭವಿಗಳು ಸೌಲಭ್ಯ ಪಡೆಯಲು ಸಹಕಾರಿಯಾಗಲಿದೆ ಎಂದ ಸಚಿವರು ಇದಲ್ಲದೆ ಬೆಂಗಳೂರು ಒನ್ ಕೇಂದ್ರಗಳಿಗೂ ಸಂಪರ್ಕ ಕಲ್ಪಿಸಲಾಗುವುದು. ಸದ್ಯದಲ್ಲೇ ಖಜಾನೆ-2 ಯೋಜನೆಯು ಜಿಲ್ಲಾ ಮಟ್ಟದಲ್ಲಿ ಪ್ರಾರಂಭವಾಗಲಿದ್ದು, ಅದಕ್ಕೂ ಸಂಪರ್ಕ ಕಲ್ಪಿಸಿ ಅವರ ಯೋಜನೆಗಳ ಹಣವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಸಚಿವೆ ಉಮಾಶ್ರೀ ಅವರು ಸುದ್ದಿಗಾರರಿಗೆ ತಿಳಿಸಿದರು. ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಮಹಾದೇವನ್ ಅವರು ಉಪಸ್ಥಿತರಿದ್ದರು.