ನವದೆಹಲಿ : ಜಮ್ಮು-ಕಾಶ್ಮೀರದ ಸೇನಾ ಪ್ರಧಾನ ಕಛೇರಿ ಮೇಲೆ ನಡೆದಿರುವ ಭಯೋತ್ಪಾದಕ ದಾಳಿಗೆ ಪಾಕಿಸ್ತಾನವೇ ಕಾರಣ. ಅದೊಂದು ಭಯೋತ್ಪಾದಕ ರಾಷ್ಟ್ರ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.
ಉರಿ ಸೆಕ್ಟರ್ ನ ಸೇನಾ ಪ್ರಧಾನ ಕಛೇರಿ ಮೇಲೆ ನಡೆದಿರುವ ಉಗ್ರರ ದಾಳಿಯಿಂದ ತೀವ್ರ ಆಘಾತ ಉಂಟಾಗಿದೆ. ಈ ದಾಳಿಗೆ ಪಾಕಿಸ್ತಾನದ ನೇರ ಬೆಂಬಲವಿದೆ. ಭಯೋತ್ಪಾದಕ ರಾಷ್ಟ್ರವಾಗಿರುವ ಪಾಕಿಸ್ತಾನವನ್ನು ವಿಶ್ವದಲ್ಲಿ ಒಂಟಿ ಮಾಡಬೇಕು ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಪಾಕಿಸ್ತಾನ ಭಯೋತ್ಪಾದಕರಿಗೆ ಬೆಂಬಲ ನೀಡುವುದನ್ನು ಮುಂದುವರೆಸಿದೆ. ವಿಶ್ವ ಸಮುದಾಯದಿಂದ ಪಾಕಿಸ್ತಾನಕ್ಕೆ ಬೆಂಬಲ ಸಿಗದಂತೆ ಪ್ರತ್ಯೇಕಿಸಬೇಕು ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಬೆಳಿಗ್ಗೆ 5:30 ರ ವೇಳೆಗೆ ಉರಿ ಸೆಕ್ಟರ್ ನಲ್ಲಿರುವ ಸೇನಾ ಪ್ರಧಾನ ಕಚೇರಿ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 17 ಯೋಧರು ಹುತಾತ್ಮರಾಗಿದ್ದಾರೆ.