ನವದೆಹಲಿ : ಸಾಮಾನ್ಯ ಬಜೆಟ್ ನೊಂದಿಗೆ ರೈಲ್ವೆ ಬಜೆಟ್ ನ್ನು ವಿಲೀನಗೊಳಿಸುವ ನೂತನ ಸಂಪ್ರದಾಯಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಮ್ಮತಿ ನೀಡಿದೆ.
ಈ ಮೂಲಕ ಪ್ರತ್ಯೇಕ ರೈಲ್ವೆ ಬಜೆಟ್ ಮಂಡಿಸುವ ಒಂಭತ್ತು ದಶಕಗಳ ಹಳೇ ಸಂಪ್ರದಾಯಕ್ಕೆ ತೆರೆಬಿದ್ದಿದೆ. ಕೇಂದ್ರ ವಾರ್ಷಿಕ ಬಜೆಟ್ನನ್ನು ಒಂದು ತಿಂಗಳ ಮುನ್ನವೇ ಮಂಡಿಸಲು ನಿರ್ಧರಿಸಿರುವ ಸರ್ಕಾರ, ರೈಲ್ವೆ ಬಜೆಟ್ ನ್ನು ಇದರಲ್ಲಿ ಸೇರಿಸಲಿರುವುದರಿಂದ ಈ ಪ್ರಕ್ರಿಯೆಯನ್ನು ಸರಳಗೊಳಿಸಲು ಅನಗತ್ಯ ವರ್ಗೀಕರಣಗಳನ್ನು ತೆಗೆದು ಹಾಕಲಿದೆ.
ಅಲ್ಲದೇ ಫೆಬ್ರವರಿ ಬದಲು ಜನವರಿ ತಿಂಗಳಲ್ಲಿ ಸಾಮಾನ್ಯ ಬಜೆಟ್ ಮಂಡನೆ ಮಾಡಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದರೊಂದಿಗೆ ಯೋಜನಾ- ಯೋಜನೇತರ ವೆಚ್ಚಗಳ ನಡುವೆ ವರ್ಗಿಕರಣ ಮಾಡುವುದನ್ನು ಕೈ ಬಿಡಲು ತೀರ್ಮಾನ ಕೈಗೊಳ್ಳಲಾಗಿದೆ.
ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿಯನ್ನು ಶೇ.20ರಷ್ಟು ಹೆಚ್ಚಿಸಲು ಹಾಗೂ ದೇಶದ ಅನೇಕ ರಾಜ್ಯಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆ ಆಗದಿರುವುದರಿಂದ ಒಂದು ವರ್ಷಕ್ಕೆ ಅಗತ್ಯವಾದಷ್ಟು ದವಸ- ಧಾನ್ಯಗಳು, ಖಾದ್ಯ ತೈಲಗಳ ಮತ್ತು ತೈಲ ಬೀಜಗಳ ದಾಸ್ತಾನು ಮಿತಿ ವಿಸ್ತರಿಸಲು ಸಂಪುಟ ಒಪ್ಪಿಗೆ ಸೂಚಿಸಿದೆ.