ಬೆಂಗಳೂರು : ರಾಜ್ಯದ ನೆಲ, ಜಲ ಹಾಗೂ ಭಾಷೆಗೆ ಸಂಬಂಧಿಸಿದಂತೆ ನಾವೆಂದೂ ವಿಭಿನ್ನ ನಿಲುವು ತೆಗೆದುಕೊಂಡಿಲ್ಲ. ಎಲ್ಲಾ ರಾಜಕೀಯ ಪಕ್ಷಗಳೂ ಒಗ್ಗಟ್ಟು ಪ್ರದರ್ಶಿಸಿದ್ದವು. ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಸರ್ವಪಕ್ಷಗಳ ಸಭೆಯಲ್ಲಿ ಭಾರತೀಯ ಜನತಾ ಪಕ್ಷದ ಮುಖಂಡರು ಗೈರು ಹಾಜರಾಗಿರುವುದಕ್ಕೆ ತಮಗೆ ಕಾರಣ ಗೊತ್ತಿಲ್ಲ. ಆ ಪಕ್ಷದ ಎಲ್ಲಾ ಪ್ರಮುಖ ನಾಯಕರೊಂದಿಗೆ ತಾವು ಖುದ್ದಾಗಿ ಮಾತುಕತೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ವಪಕ್ಷಗಳ ಸಭೆಯಲ್ಲಿ ಹಾಜರಿದ್ದ ಎಲ್ಲಾ ಮುಖಂಡರಿಗೆ ಭರವಸೆ ನೀಡಿದರು.
ಕಾವೇರಿ ಜಲ ವಿವಾದ ಕುರಿತಂತೆ ಸೆಂಪ್ಟೆಂಬರ್ 20ರಂದು ನೀಡಿರುವ ಸುಪ್ರೀಂ ಕೋರ್ಟ್ ಆದೇಶದ ಅನುಷ್ಠಾನ ಮಾಡಲಾರದಷ್ಟು ಕಠಿಣವಾಗಿದೆ. ರಾಜ್ಯದ ಕಾವೇರಿ ಕಣಿವೆ ಪ್ರದೇಶದಲ್ಲಿ ಮುಂಗಾರು ವಿಫಲವಾಗಿರುವುದರಿಂದ ಕಾವೇರಿ ಕಣಿವೆ ಪ್ರದೇಶದ ನಾಲ್ಕೂ ಜಲಾಶಯಗಳಲ್ಲಿ ಕೇವಲ 28 ಟಿ ಎಂ ಸಿ ನೀರಿದೆ. ಮುಂದಿನ ಜೂನ್ವರೆಗೆ ಈ ನೀರನ್ನು ಸಂರಕ್ಷಿಸಿಡುವ ಜವಾಬ್ದಾರಿ ನಮ್ಮ ಸರ್ಕಾರದ ಮೇಲಿದೆ. ಪ್ರಸ್ತುತ ಲಭ್ಯವಿರುವ ನೀರನ್ನು ಬೆಂಗಳೂರು, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳೂ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರಿನ ಬಳಕೆಗೆ ಮಾತ್ರ. ಮೀಸಲಿಡಲು ನಿರ್ಧರಿಸಲಾಗಿದೆ. ಈ ವಿಷಯವನ್ನು ರಾಜ್ಯ ಸರ್ಕಾರದ ಪರ ವಕೀಲರು ಸರ್ವೋಚ್ಛ ನ್ಯಾಯಾಲಯದ ಮುಂದೆ ಸವಿವರವಾಗಿ ವಾದ ಮಂಡಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಸಿದ್ದರಾಮಯ್ಯ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಯಾವ ದೃಷ್ಠಿಕೋನವಿಟ್ಟುಕೊಂಡು ಕಾವೇರಿ ಮೇಲ್ವಿಚರಣಾ ಸಮಿತಿಯ ಆದೇಶವನ್ನು ರದ್ದುಗೊಳಿಸಿ ( ಸೂಪರ್ಸೀಡ್ ಮಾಡಿ ) ಮೂರು ಸಾವಿರ ಕ್ಯೂಸೆಕ್ಸ್ ನೀರು ಬಿಡುವ ಬದಲು ಆರು ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಸರ್ವೋಚ್ಛ ನ್ಯಾಯಾಲಯವು ಆದೇಶಿಸಿದೆಯೋ ನಿಜವಾಗಿಯೂ ಅರ್ಥವಾಗುತ್ತಿಲ್ಲ. ಆದರೆ, ನ್ಯಾಯಾಲಯದ ಈ ಆದೇಶವನ್ನು ರಾಜ್ಯ ಸರ್ಕಾರವು ಅನುಷ್ಠಾನಗೊಳಿಸಲು ಸಾಧ್ಯವಿಲ್ಲ ಎಂಬ ಅಂಶವನ್ನು ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಅವರೂ ಸೇರಿದಂತೆ ಸಭೆಯಲ್ಲಿ ಹಾಜರಿದ್ದ ಮಾಜಿ ಮುಖ್ಯಮಂತ್ರಿಗಳಾದ ಎಂ ವೀರಪ್ಪ ಮೊಯಿಲಿ, ಹೆಚ್. ಡಿ. ಕುಮಾರಸ್ವಾಮಿ, ಲೋಕಸಭೆಯಲ್ಲಿನ ಕಾಂಗ್ರೆಸ್ ಪಕ್ಷದ ಧುರೀಣ ಎಂ. ಮಲ್ಲಿಕಾರ್ಜುನ ಖರ್ಗೆ, ಕೆ. ಎಸ್. ಪುಟ್ಟಣ್ಣಯ್ಯ ಅವರೂ ಸೇರಿದಂತೆ ಅನೇಕ ಮುಖಂಡರು ಈಗಾಗಲೇ ತಮ್ಮ ಅಭಿಪ್ರಾಯಗಳನ್ನು ಸ್ಪಷ್ಟಡಿಸಿದ್ದಾರೆ. ಸರ್ವೋಚ್ಛ ನ್ಯಾಯಾಲಯದ ಮುಂದೆ ತಮಿಳು ನಾಡು ರಾಜ್ಯದ ಮನವಿ ಇಲ್ಲದೆಯೇ ನ್ಯಾಯಪೀಠವು ನಾಲ್ಕು ವಾರಗಳೊಳಗೆ ಕಾವೇರಿ ನಿರ್ವಹಣಾ ಮಂಡಳಿ ರಚಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿರುವುದು ಅಸಮಂಜಸ ಆದೇಶ ಎನಿಸಿದೆ ಎಂದರು.
ಎಲ್ಲರ ಅಭಿಪ್ರಾಯಗಳನ್ನು ಪಡೆದು ರಾಜ್ಯದ ಹಿತವನ್ನು ಕಾಪಾಡಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಿದ್ದರಾಮಯ್ಯ ಅವರು ಸಭೆಯಲ್ಲಿ ಪ್ರಕಟಿಸಿದರು.
ಈ ಮುನ್ನ ಮಾತನಾಡಿದ ಮಾಜಿ ಪ್ರಧಾನ ಮಂತ್ರಿ ಹೆಚ್. ಡಿ. ದೇವೇಗೌಡ ಅವರು ತಮಿಳುನಾಡು ಕಾನೂನು ಹೋರಾಟದ ಬದಲು ರಾಜಕೀಯ ಹೋರಾಟ ಮಾಡುತ್ತಲಿದೆ ಎಂದೆನಿಸುತ್ತದೆ. ರಾಜ್ಯ ಸರ್ಕಾರವು ಒಂಭತ್ತು ವರ್ಷಗಳ ಹಿಂದೆ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಭಾರತ ಸರ್ವೋಚ್ಛ ನ್ಯಾಯಾಲಯದವು ಅಕ್ಟೋಬರ್ 18 ರಂದು ಕೈಗೆತ್ತಿಕೊಳ್ಳುವ ನಿರೀಕ್ಷೆ ಇದೆ. ರಾಜ್ಯದಲ್ಲಿ ನೀರಿನ ಕೊರತೆ ಇದೆ ಎಂದು ನ್ಯಾಯಪೀಠಕ್ಕೆ ಮೇಲಿಂದ ಮೇಲೆ ಮನವರಿಕೆ ಮಾಡಿಕೊಟ್ಟಿದ್ದರೂ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಭೆಗೆ ತಿಳಿಸಿದರು.