ನವದೆಹಲಿ : ಜಮ್ಮು-ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ದಾಳಿ ನಡೆದಿ 18 ಯೋಧರ ಹತ್ಯೆಗೆ ಕಾರಣರಾದವರನ್ನು ಶಿಕ್ಷಿಸದೇ ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಹೇಳಿದ್ದಾರೆ.
ಮನ್ ಕಿ ಬಾತ್ ನ 24 ನೇ ಸರಣಿಯಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು ಹಲವು ವಿಷಯಗಳನ್ನು ಪ್ರಸ್ತಾಪಿಸಿದರು. ಉರಿ ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿದ ಅವರು, ಹುತಾತ್ಮರಾದ ಎಲ್ಲಾ ಯೋಧರಿಗೂ ಶ್ರದ್ಧಾಂಜಲಿ ಅರ್ಪಿಸುವುದಾಗಿ ತಿಳಿಸಿದರು. ಉರಿ ದಾಳಿ ಇಡಿ ದೇಶಕ್ಕೆ ಆದ ನಷ್ಟ. 18 ಯೋಧರನ್ನು ದೇಶ ಕಳೆದುಕೊಂಡಿದೆ. ಉರಿ ದಾಳಿ ಬಗ್ಗೆ ದೇಶದ ಜನರಲ್ಲಿ ಸಾಕಷ್ಟು ಆಕ್ರೋಶ ಭುಗಿಲೆದ್ದಿದೆ. ಇದಕ್ಕೆ ಕಾರಣರಾದವರನ್ನು ಭಾರತ ಸುಮ್ಮನೆ ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.
ರಾಜಕೀಯ ನಾಯಕರಿಗೆ ಪ್ರತಿಕ್ರಿಯೆ ನೀಡಲು ಸಾಕಷ್ಟು ಸಂದರ್ಭಗಳು ಸಿಗುತ್ತವೆ. ಆದರೆ ಭಾರತೀಯ ಯೋಧರು ತಮ್ಮ ವೈರಿಗಳ ವಿರುದ್ಧ ಹೋರಾಡುವ ಮೂಲಕ ಪ್ರತಿಕ್ರಿಯೆ ನೀಡುತ್ತಾರೆ. ಸೇನೆಯ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದರು.
ಸ್ವಚ್ಛ ಭಾರತ ಅಭಿಯಾನಕ್ಕೆ 2 ವರ್ಷವಾಗುತ್ತದೆ. ಅಕ್ಟೋಬರ್ 2ರಂದು ನಡೆಯಲಿರುವ ಅಭಿಯಾನದಲ್ಲಿ ಎಲ್ಲರೂ ಭಾಗವಹಿಸಿ. ನಮ್ಮ ಭಾರತದಲ್ಲಿರುವ ಕೊಳಕಿನ ವಿರುದ್ಧ ದ್ವೇಷದ ವಾತಾವರಣ ನಿರ್ಮಾಣವಾಗಬೇಕು ಎಂದರು. ಗ್ರಾಮೀಣ ಪ್ರದೇಶಗಳಲ್ಲಿ 2.48 ಕೋಟಿ ಶೌಚಾಲಯಗಳು ನಿರ್ಮಾಣವಾಗಿವೆ. 1.5 ಕೋಟಿ ಶೌಚಾಲಯಗಳನ್ನು ಮುಂದಿನ ವರ್ಷದಲ್ಲಿ ನಿರ್ಮಾಣ ಮಾಡಲಾಗುತ್ತದೆ. ದೇಶದ ಸ್ವಚ್ಛತಾ ಬೆಳವಣಿಗೆಗಳ ಬಗ್ಗೆ ಜನರು 1969 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಮುಂದಿನ ವಾರ ನಾವು ದುರ್ಗಾ ಪೂಜೆ ಹಾಗೂ ನವರಾತ್ರಿ ಹಬ್ಬವನ್ನು ಆಚರಿಸುತ್ತಿದ್ದೇವೆ. ಈ ಹಬ್ಬ ನಮ್ಮ ಏಕತೆ, ಸಾಮರಸ್ಯ ಹಾಗೂ ಶಕ್ತಿಯ ಸಂಕೇತವಾಗಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಪ್ಯಾರಾಒಲಂಪಿಕ್ ನಲ್ಲಿ ಸಾಧನೆ ಮಾಡುತ್ತಿರುವ ಭಾರತೀಯ ಕ್ರೀಡಾಪಟುಗಳನ್ನು ಮೋದಿ ಅಭಿನಂದಿಸಿದ್ದಾರೆ.