ನವದೆಹಲಿ : ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯಕ್ಕೆ ಮತ್ತೆ ಹಿನ್ನಡೆಯುಂಟಾಗಿದ್ದು, ಸುಪ್ರೀ ಕೋರ್ಟ್ ಮತ್ತೆ 18 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ಕರ್ನಾಟಕ ಸರ್ಕಾರಕ್ಕೆ ಆದೇಶ ನೀಡಿದೆ.
ಸೆ. 20ರಂದು ನೀಡಿರುವ ಆದೇಶ ಮಾರ್ಪಡಿಸುವಂತೆ ಕೋರಿ ಕರ್ನಾಟಕ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ನಾಳೆಯಿಂದ ಪ್ರತಿದಿನ 6000 ಕ್ಯೂಸೆಕ್ ನಂತೆ ಮೂರು ದಿನಗಳಲ್ಲಿ ಒಟ್ಟು 18 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುವಂತೆ ಆದೇಶ ನೀಡಿದೆ.
ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ನ ದ್ವಿಸದಸ್ಯ ಪೀಠದ ನ್ಯಾ.ದೀಪಕ್ ಮಿಶ್ರಾ ಮತ್ತು ನ್ಯಾ.ಉದಯ್ ಲಲಿತ್ ಅವರಿದ್ದ ಪೀಠ ನಿತ್ಯ 6 ಸಾವಿರ ಕ್ಯೂಸೆಕ್ ನಂತೆ ಇನ್ನೂ ಮೂರು ದಿನ ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಆದೇಶ ನೀಡಿದ್ದು, ಸೆ.30ಕ್ಕೆ ವಿಚಾರಣೆ ಮುಂದೂಡಿದೆ. ಅಲ್ಲದೇ ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ಕೈಗೊಳ್ಳಲಾಗಿರುವ ನಿರ್ಣಯ ಪ್ರತ್ಯೇಕ ವಿಷಯ ಎಂದು ಹೇಳಿದೆ.
ಕರ್ನಾಟಕದ ಪರವಾಗಿ ವಾದ ಮಂಡಿಸಿದ ನ್ಯಾ.ಫಾಲಿ ನಾರಿಮನ್, ಸಧ್ಯದ ಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವೇ ಇಲ್ಲ ಎಂದು ಹೇಳಿದರು. ತಮಿಳುನಾಡಿಗೆ ನೀರು ಬಿಡಬೇಕೆಂಬ ಸುಪ್ರೀಂಕೋರ್ಟ್ ಆದೇಶವನ್ನು ಯಾಕೆ ಪಾಲಿಸಲಿಲ್ಲ? ಎಂದು ಕೋರ್ಟ್ ಕರ್ನಾಟಕವನ್ನು ಪ್ರಶ್ನಿಸಿತು. ಸಧ್ಯ ಕರ್ನಾಟಕ್ದಲ್ಲಿ ಕುಡಿಯುವ ನೀರುಗೂ ಸಮಸ್ಯೆ ಎದುರಾಗಿದ್ದು, ಈ ಕುರಿತು ವಿಧಾನಮಂದಲ ಅಧಿವೇಶನದಲ್ಲಿ ಈಗಿರುವ ನೀರು ಕುಡಿಯುವ ನೀರಿಗೆ ಮಾತ್ರ ಬಳಸಬೇಕು ಎಂದು ನಿರ್ಣಯ ಕೈಗೊಳ್ಳಲಾಗಿ. ಇದು ನ್ಯಾಯಾಲಯದ ಆದೇಶಕ್ಕೆ ವಿರುದ್ಧವಲ್ಲ ಎಂದು ನಾರಿಮನ್ ವಾದ ಮಂಡಿಸಿದರು.
ಇದೇ ವೇಳೆ ನೀರು ಬಿಡುವವರೆಗೂ ಕರ್ನಾಟಕದ ವಾದವನ್ನು ಆಲಿಸಬಾರದು ಹಾಗೂ ಬೆಂಗಳೂರಿಗೆ ಕಾವೇರಿ ನೀರು ಕೇಳುವುದು ಸರಿಯಲ್ಲ ಎಂದು ವಿಚಾರಣೆ ವೇಳೆ ತಮಿಳುನಾಡು ವಾದ ಮಂಡಿಸಿದೆ. ಉಭಯ ರಾಜ್ಯಗಳ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ನಿಮ್ಮ ನಿರ್ಣಯ ಏನೇ ಇದ್ದರೂ ಮೊದಲು ನ್ಯಾಯಾಲಯದ ಆದೇಶದಂತೆ ನೀರು ಬಿಡಿ ಎಂದು ಸುಪ್ರೀಂ ವಿಭಾಗೀಯ ನ್ಯಾಯಪೀಠ ಕರ್ನಾಟಕಕ್ಕೆ ಹೇಳಿದ್ದು, ವಿಚಾರಣೆಯನ್ನು ಸೆ.30ಕ್ಕೆ ಮುಂದೂಡಿದೆ.