ನವದೆಹಲಿ : ಭಾರತ ತಾನಾಗಿ ಯಾವುದೇ ದೇಶದ ಮೇಲೆ ದಾಳಿ ಮಾಡುವುದಿಲ್ಲ. ಆದರೆ ಇದರ ಪ್ರಯೋಜನ ಪಡೆದುಕೊಂಡು ನಮ್ಮ ಭೂಮಿ ವಶಪಡಿಸಿಕೊಳ್ಳಲು ಬೇರೆ ದೇಶ ಪ್ರಯತ್ನ ಮಾಡಿದರೆ ಭಾರತ ಸುಮ್ಮನೆ ಇರುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಪ್ರವಾಸಿ ಭಾರತೀಯ ಕೇಂದ್ರವನ್ನು ಉದ್ಘಾಟನೆ ಮಾಡಿದ ಬಳಿಕ ಮಾತನಾಡಿರುವ ಅವರು, ಭಾರತ ಯಾವತ್ತೂ ಬೇರೆದೇಶಗಳ ಮೇಲೆ ತಾನಾಗಿಯೇ ದಾಳಿ ನಡೆಸಿಲ್ಲ. ಇತರ ದೇಶಗಳ ನೆಲವನ್ನು ವಶಪಡಿಸಿಕೊಳ್ಳಲು ಯತ್ನಿಸಲೂ ಇಲ್ಲ. ಆದರೆ ಇತರ ದೇಶಗಳು ಭಾರತದ ಮೇಲೆ ದಾಳಿ ನಡೆಸಿದಲ್ಲಿ, ಪಿತೂರಿ ನಡೆಸಿದಲ್ಲಿ ಮಾತ್ರ ಭಾರತ ಸಿಡಿದೇಳುತ್ತದೆ ಎಂದರು.
ಭಾರತಕ್ಕೆ ಎಂದೂ ನೆಲದ ಹಸಿವು ಇರಲಿಲ್ಲ. ನಾವು ಎಂದೂ ಬೇರೆ ರಾಷ್ಟ್ರಗಳ ಮೇಲೆ ದಾಳಿ ನಡೆಸಲಿಲ್ಲ, ಬದಲು ಸಹಸ್ರಾರು ವರ್ಷಗಳಿಂದ ಇತರಿಗಾಗಿ ಭಾರತ ಬದುಕಿದೆ. ಇಂದು ವಿಶ್ವದ ಎಲ್ಲ ಜನರು ಭಾರತದೊಂದಿಗೆ ಸ್ನೇಹ ಬೆಳೆಸಲು ಇಚ್ಛಿಸುತ್ತಾರೆ. ಇದಕ್ಕೆ ಅನಿವಾಸಿ ಭಾರತೀಯರು ಸಹ ಸಹಾಯ ಮಾಡಿದ್ದಾರೆ ಎಂದು ಹೇಳಿದರು.
ಮೊದಲನೇ ಮಹಾಯುದ್ಧ ನಡೆದ ಸಮಯದಲ್ಲಿ ಸುಮಾರು 1.5 ಲಕ್ಷ ಭಾರತೀಯರು ಯುದ್ಧದಲ್ಲಿ ಬಲಿಯಾಗಿದ್ದರು. ಕಳೆದ ಎರಡು ವರ್ಷದಲ್ಲಿ ನಡೆದ ದಾಳಿಯಲ್ಲಿ ಭಾರತೀಯ ಸರ್ಕಾರ ಸಂಕಷ್ಟ ಪರಿಸ್ಥಿತಿಯಲ್ಲೂ ವಿದೇಶಿಯರು ಸೇರಿದಂತೆ ಸಾಕಷ್ಟು ಜನರನ್ನು ರಕ್ಷಣೆ ಮಾಡಿದೆ ಎಂದು ತಿಳಿಸಿದರು.