ಬೆಂಗಳೂರು : ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ತುಮಕೂರು ಸಿದ್ಧಗಂಗಾಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಸಂಪೂರ್ಣ ಗುಣಮುಖರಾಗಿದ್ದು, ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಶ್ರೀಗಳಿಗೆ ಜಾಂಡೀಸ್, ಜ್ವರ, ಪಿತ್ತನಾಳ ಸಮಸ್ಯೆ ಹಿನ್ನಲೆಯಲ್ಲಿ ಬೆಂಗಳೂರಿನ ಕೆಂಗೇರಿ ಸಮೀಪದ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಬೆಳಗ್ಗೆ ದಾಖಲಾಗಿದ್ದ ಶ್ರೀಗಳಿಗೆ ಚಿಕಿತ್ಸೆ ನೀಡಲಾಗಿದ್ದು ಚಿಕಿತ್ಸೆಗೆ ಶೀಘ್ರವಾಗಿ ಸ್ಪಂದಿಸಿದ್ದರು. ಹೀಗಾಗಿ ಒಂದು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಇಂದು ಡಿಸ್ಚಾರ್ಜ್ ಮಾಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಡಾ.ರವೀಂದ್ರ, ಶಿವಕುಮಾರ ಸ್ವಾಮೀಜಿ ಅವರಿಗೆ ಕಾಣಿಸಿಕೊಂಡಿದ್ದ ಜಾಂಡೀಸ್ ಹಾಗು ಜ್ವರ ಸಂಪೂರ್ಣ ವಾಸಿಯಾಗಿದೆ. ಕಿಡ್ನಿ ಕೂಡ ಸರಿಯಾಗಿಯೇ ಕೆಲಸ ಮಾಡುತ್ತಿದೆ. ಶ್ರೀಗಳು ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಶ್ರೀಗಳು ಗುಣಮುಖರಾಗಿದ್ದರೂ ಕೂಡ ಪಿತ್ತನಾಳದಲ್ಲಿ ಮತ್ತೆ ಬ್ಲಾಕೇಜ್ ಆಗುವ ಸಾಧ್ಯತೆ ಇದೆ. ಹಾಗಾಗಿ ತುಮಕೂರಿನ ವೈದ್ಯರು ಚಿಕಿತ್ಸೆ ಮುಂದುವರೆಸಲಿದ್ದಾರೆ. ನಮ್ಮ ಆಸ್ಪತ್ರೆಯ ಒಂದು ತಂಡ ಕೂಡ ಮಠಕ್ಕೆ ತೆರಳಿ ಚಿಕಿತ್ಸೆ ನೀಡಲಿದೆ ಎಂದು ವಿವರಿಸಿದ್ದಾರೆ.