ನವದೆಹಲಿ : ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಹೆಸರನ್ನು ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಗೆ ಕೇಂದ್ರ ಕ್ರೀಡಾ ಸಚಿವಾಲಯ ಶಿಫಾರಸ್ಸು ಮಾಡಿದೆ.
ಈ ಮೂಲಕ ಪಿ.ವಿ ಸಿಂಧು 2017ರ ಪದ್ಮಭೂಷಣ ಪ್ರಶಸ್ತಿಗೆ ಶಿಫಾರಸುಗೊಂಡಿರುವ ಭಾರತದ ಎರಡನೇ ಕ್ರೀಡಾಪಟುವಾಗಿದ್ದಾರೆ. ಈ ಹಿಂದೆ ಇದೇ ಪ್ರಶಸ್ತಿಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೆಸರನ್ನು ಶಿಫಾರಸ್ಸು ಮಾಡಲಾಗಿತ್ತು.
ಇತ್ತೀಚೆಗಷ್ಟೇ ಪಿ.ವಿ ಸಿಂಧು ಕೊರಿಯಾ ಓಪನ್ ಸೂಪರ್ ಸರಣಿ ಪ್ರಶಸ್ತಿ ಜಯಿಸುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಶಟ್ಲರ್ ಎನಿಸಿಕೊಂಡಿದ್ದರು. ವಿಶ್ವದ ನಂ.2 ಆಟಗಾರ್ತಿಯಾಗಿರುವ ಸಿಂಧು 2015ರ ಮಾರ್ಚ್ನಲ್ಲಿ ಭಾರತದ ನಾಲ್ಕನೆ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿ ಪದ್ಮಶ್ರೀಗೆ ಭಾಜನರಾಗಿದ್ದರು. 2016ರಲ್ಲಿ ರಿಯೋ ಡಿ ಜನೈರೋದಲ್ಲಿ ನಡೆದಿದ್ದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸಿಂಧು ಬೆಳ್ಳಿ ಪದಕ ಗೆದ್ದ ಭಾರತದ ಏಕೈಕ ಬ್ಯಾಡ್ಮಿಂಟನ್ ತಾರೆ ಎಂಬ ಕೀರ್ತಿಗೆ ಭಾಜನರಾಗಿದ್ದರು. ಅಲ್ಲದೇ ಇಂಡಿಯಾ ಓಪನ್ ಸೂಪರ್ ಸರಣಿ ಹಾಗೂ ಸೈಯದ್ ಮೋದಿ ಇಂಟರ್ ನ್ಯಾಷನಲ್ ಟೂರ್ನಿಯಲ್ಲಿ ಈಗಾಗಲೇ ಪ್ರಶಸ್ತಿ ಜಯಿಸಿದ್ದಾರೆ.