ಮೈಸೂರು : ವಿಶ್ವ ವಿಖ್ಯಾತ ಜಂಬೂಸವಾರಿ ಹಿನ್ನಲೆಯಲ್ಲಿ ಮೆರವಣಿಗೆ ಸಾಗುವ ಹಲವು ಮಾರ್ಗಗಳಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಹೊರಗಡೆಯಿಂದ ಬರುವ ವಾಹನಗಳನ್ನು ಅರಮನೆ, ಬನ್ನಿಮಂಟಪಗಳಲ್ಲಿ ಗುರುತಿಸಲ್ಪಟ್ತಿರುವ ಸ್ಥಳಗಳಲ್ಲೇ ಪಾರ್ಕಿಂಗ್ ಮಾಡಬೇಕಿದ್ದು, ವಿವಿಐಪಿ, ವಿಐಪಿ ವಾಹನಗಳಿಗೆ ಮಾತ್ರ ಪ್ರವೇಶ ನೀಡಲಾಗಿದೆ.
ಉಳಿದಂತೆ ಜಂಬೂಸವಾರಿ ಮುಗಿಯುವವರೆಗೂ ಅರಮನೆ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಜಂಬೂಸವಾರಿ ಮೆರವಣಿಗೆ ಹಿನ್ನಲೆಯಲ್ಲಿ ನಗರದಾದ್ಯಂತ ವಿಶೇಷ ಭದ್ರತೆ ಕೈಗೊಳ್ಳಲಾಗಿದೆ.
ಮೂರು ಹಂತಗಳಲ್ಲಿ ಭದ್ರತೆ ಕೈಗೊಳ್ಳಲಾಗಿದ್ದು, ಅರಮನೆ ಆವರಣ, ಜಂಬೂ ಸವಾರಿ ಮೆರವಣಿಗೆ ಮಾರ್ಗ, ಬನ್ನಿಮಂಟಪದ ಪಂಜಿನ ಕವಾಯಿತು ನಡೆಯುವ ಮೈದಾನಗಳಲ್ಲಿ ಭದ್ರತೆ ಕಲ್ಪಿಸಲಾಗಿದೆ. 5000 ಮಂದಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ದಸರಾಭದ್ರತೆಗಾಗಿ ನಗರದಲ್ಲಿ ಪ್ರಮುಖವಾಗಿ 66 ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಅರಮನೆ, ಬನ್ನಿ ಮಂಟಪ, ಮೆರವಣಿಗೆ ಮಾರ್ಗ, ಇತರೆ ಪ್ರಮುಖ ಭಾಗಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದು, ದಿನದ 24 ಗಂಟೆಗಳೂ ರೆಕಾರ್ಡ್ ಆಗುವ ವ್ಯವಸ್ಥೆ ಮಾಡಲಾಗಿದೆ. ಅಪರಾದ ಕೃತ್ಯ ನಡೆಯುವುದನ್ನು ತಡೆಗಟ್ಟಲು ನುರಿತ ಅಪರಾಧ ವಿಭಾಗದ ಅಧಿಕಾರಿಗಳು, ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.