October 2, 2017
ಗಾಂಧೀಜಿ ಹಾಗೂ ಶಾಸ್ತ್ರಿಜಿ ಜಯಂತಿ: ರಾಷ್ಟ್ರಪತಿ, ಪ್ರಧಾನಿ, ಗಣ್ಯರಿಂದ ಪುಷ್ಪನಮನ
ಗಾಂಧೀಜಿಗೆ ಪ್ರಧಾನಿ ಮೋದಿಯವರಿಂದ ಪುಷ್ಪನಮನ
ನವದೆಹಲಿ : ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಹಿನ್ನಲೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಬಾಪೂ, ಶಾಸ್ತ್ರಿ ಅವರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು.
ಬೆಳಿಗ್ಗೆ ರಾಜಘಾಟ್ ಗೆ ತೆರಳಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ಮೋದಿಯವರು ಗಾಂಧೀಜಿಯವರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು. ಬಳಿಕ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಬಿಜೆಪಿ ಹಿರಿಯ ವರಿಷ್ಠ ಎಲ್.ಕೆ. ಅಡ್ವಾಣಿಯವರು ಸೇರಿದಂತೆ ಇನ್ನಿತರೆ ಗಣ್ಯಾತಿಗಣ್ಯರು ಕೂಡ ಗಾಂಧೀಜಿಯವರ ಸ್ಮಾರಕಕ್ಕೆ ಪುಷ್ಪನಮನ ಅರ್ಪಿಸಿದರು.
ಗಾಂಧಿ ಸ್ಮಾರಕದಲ್ಲಿ ರಾಷ್ಟ್ರಪತಿ, ಪ್ರಧಾನಿ ಅವರಿಂದ ಗೌರವಾರ್ಪಣೆ..
ಇದೇ ವೇಳೆ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಹಿನ್ನಲೆಯಲ್ಲಿ ವಿಜಯ್ ಘಾಟ್ ನಲ್ಲಿ ಶಾಸ್ತ್ರಿಯವರ ಸ್ಮಾರಕಕ್ಕೂ ರಾಷ್ಚ್ರಪತಿ ಕೋವಿಂದ್,
ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಭೇಟಿ ಕೊಟ್ಟು,
ಪುಷ್ಪನಮನ ಸಲ್ಲಿಸಿದರು.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ
ಪ್ರಧಾನಿ ಮೋದಿ, ಗಾಂಧಿ ಜಯಂತಿ ಹಿನ್ನಲೆಯಲ್ಲಿ ಪ್ರೀತಿಯ ಬಾಪು ಅವರಿಗೆ ನಾನು ತಲೆಬಾಗುತ್ತೇನೆ. ಅವರ ಆದರ್ಶಗಳು ವಿಶ್ವದ ಕೋಟ್ಯಾಂತರ ಜನರಿಗೆ ಪ್ರೇರಣೆಯಾಗಿದೆ ಎಂದು ಹೇಳಿದ್ದಾರೆ.
ಇನ್ನು ಇಂದು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಕೂಡ ಆಗಿದ್ದು, ಶಾಸ್ತ್ರಿಯವರು ಭಾಷಣ ಮಾಡಿರುವ ಹಳೆಯ ವಿಡಿಯೋವೊಂದನ್ನು ಹಂಚಿಕೊಂಡು ಶಾಸ್ತ್ರಿಯವರಿಗೆ ನಮನಗಳನ್ನು ಸಲ್ಲಿಸಿದ್ದಾರೆ.