ಬೆಂಗಳೂರು : ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸುರಿದ ಭಾರಿ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಅಮಳೆ ಅವಾಂತರಗಳಿಂದ ಸಂಭವಿಸಿದ ಅನಾಹುತಗಳಲ್ಲಿ ಏಳು ಜನರು ನೀರುಪಾಲಾಗಿದ್ದಾರೆ.
ರಾಜಕಾಲುವೆಯಲ್ಲಿ ಮೂವರು ಕೊಚ್ಚಿ ಹೋಗಿದ್ದು, ಗೋಡೆ ಕುಸಿತದಿಂದ ದಂಪತಿ ಮೃತಪಟ್ಟಿದ್ದಾರೆ.ಬೆಂಗಳೂರು, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ಬೀದರ್, ಕಲಬುರಗಿ, ವಿಜಯಪುರ, ಹಾವೇರಿ, ರಾಯಚೂರು, ಹಾಸನಗಳಲ್ಲಿ ಭಾರಿ ಮಳೆಯಾಗಿದೆ.
ಬೆಂಗಳೂರಿನ ಕುರುಬರಹಳ್ಳಿಯ ವೆಂಕಟರಮಣ ಸ್ವಾಮಿ ದೇವಾಲಯದ ಗೋಡೆ ಕುಸಿದಿದ್ದು, ಅದನ್ನು ನೋಡಲು ಹೋದ ಅರ್ಚಕ ವಾಸುದೇವ ಎಂಬುವರು ಮಳೆ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಅದೇ ಬಡಾವಣೆಯ 18ನೇ ಕ್ರಾಸ್ನಲ್ಲಿ ಮನೆಯೊಂದರ ಗೋಡೆ ಕುಸಿದು ಶಂಕರಪ್ಪ ಹಾಗೂ ಕಮಲಮ್ಮ ದಂಪತಿ ಮೃತಪಟ್ಟಿದ್ದಾರೆ. ಅಲ್ಲದೆ, ಲಗ್ಗೆರೆ ರಾಜಕಾಲುವೆಯಲ್ಲಿ ತಾಯಿ ಮೀನಾಕ್ಷಿ ಮತ್ತು ಮಗಳು ಪುಷ್ಪ ಕೊಚ್ಚಿ ಹೋಗಿದ್ದು, ಮೀನಾಕ್ಷಿಯವರ ಪತಿ ಎದುರೇ ಈ ದುರಂತ ನಡೆದಿದೆ.
ಮಳೆ ಅನಾಹುತದಿಂದ ಕುರುಬ ರಹಳ್ಳಿ-ಲಗ್ಗೆರೆಯ ತಗ್ಗು ಪ್ರದೇಶ ಹಾಗೂ ರಾಜಕಾಲುವೆ ಅಕ್ಕ-ಪಕ್ಕದ ನಿವಾಸಿಗಳು ಇಡೀ ರಾತ್ರಿ ಜೀವ ಕೈಯಲ್ಲಿ ಹಿಡಿದು ಆತಂಕದಲ್ಲಿ ಕಳೆದಿದ್ದಾರೆ. ಮೈಸೂರು ರಸ್ತೆಯ ಗಾಳಿ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ರಸ್ತೆ ಜಲಾವೃತಗೊಂಡಿತ್ತು. ಕೆಂಪೇಗೌಡನಗರದಲ್ಲಿ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಮನೆಗಳ ವಸ್ತುಗಳು ನೀರಿನಲ್ಲಿ ತೇಲಿಕೊಂಡು ಹೋಗಿವೆ.
ಹೊಸಗುಡ್ಡದಹಳ್ಳಿಯಲ್ಲಿ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರು, ಬೈಕ್ಗಳು ನೀರಿನಲ್ಲಿ ಮುಳುಗಡೆಯಾದವು. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸ್ಥಳಕ್ಕೆ ಬಂದಿಲ್ಲ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರಿನ ಅರಶಿನಗುಪ್ಪೆ ಗ್ರಾಮದ ನಿವಾಸಿ ಲಕ್ಷ್ಮಣ (45) ಎಂಬವರು ಸಿಡಿಲಿಗೆ ಬಲಿಯಾಗಿದ್ದಾರೆ.ಬೆಂಗಳೂರಿನಲ್ಲಿ ಪ್ರಸಕ್ತ ಸಾಲಿನ ಮಳೆಗೆ ಬಲಿಯಾದವರ ಸಂಖ್ಯೆ ಇದೀಗ 10ಕ್ಕೇರಿದೆ. ರಾಜ್ಯಾದ್ಯಂತ ಈ ಮಳೆಗಾಲದಲ್ಲಿ ಬಲಿಯಾದವರ ಸಂಖ್ಯೆ 135 ದಾಟಿದೆ. ಇದುವರೆಗೂ ಈ ಮಳೆಗಾಲದಲ್ಲಿ ಸುಮಾರು ಏಳು ಸಾವಿರಕ್ಕೂ ಹೆಚ್ಚು ಮನೆಗಳು ಕುಸಿದಿವೆ. 1123 ಜಾನುವಾರುಗಳು ಮೃತಪಟ್ಟಿವೆ.
ಮುಂದಿನ ಎರಡು ದಿನಗಳಲ್ಲಿ ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಮೈಸೂರು ಮತ್ತು ತುಮಕೂರು ನಗರಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.