ಲಖ್ನೌ : ಉತ್ತರ ಪ್ರದೇಶದಲ್ಲಿ ಬಿ.ಎಸ್.ಪಿ ಜತೆ ಕೈಜೋಡಿಸಲು ಸಮಾಜವಾದಿ ಪಕ್ಷ ಸಿದ್ಧವಿದೆ ಎಂದು ಎಸ್.ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ ಸೋಲಿಸಬೇಕಾದರೆ ಸಮಾಜವಾದಿ ಪಕ್ಷ ಮತ್ತು ಬಿ.ಎಸ್.ಪಿ ಮೈತಿಮಾಡಿಕೊಳ್ಳಬೇಕು ಎಂದು ಆರ್.ಜೆ.ಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮುಲಾಯಂ ಸಿಂಗ್, ಲಾಲು ಪ್ರಸಾದ್ ಮಧ್ಯಸ್ಥಿಕೆ ವಹಿಸಿದರೆ ಬಿ.ಎಸ್.ಪಿ ಜತೆ ಕೈಜೋಡಿಸಲು ಅಭ್ಯಂತರವಿಲ್ಲ ಎಂದು ತಿಳಿಸಿದ್ದಾರೆ.
ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಲಾಲು ಪ್ರಸಾದ್ ಯಾದವ್, ಬಿ.ಎಸ್.ಪಿ ಮುಖ್ಯಸ್ಥೆ ಮಾಯಾವತಿ ಜತೆ ಚರ್ಚೆ ನಡೆಸಲಿ ಸಮಾಜವಾದಿ ಪಕ್ಷ ಬಿ.ಎಸ್.ಪಿ ಜತೆ ಕೈಜೋಡಿಸಲು ಸಿದ್ಧವಿದೆ ಎಂದಿದ್ದಾರೆ.
ಬಿಹಾರದಲ್ಲಿ ಬಿಜೆಪಿಯನ್ನು ಸೋಲಿಸಲು ಇತ್ತೀಚೆಗಷ್ಟೇ ಲಾಲು ಪ್ರಸಾದ್ ಯಾದವ್ ಹಾಗೂ ಜೆಡಿಯು ನಾಯಕ ನಿತೀಶ್ ಕುಮಾರ್ ಕೈಜೋಡಿಸಿದ್ದರು. ಇದರ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ಬಿಜೆಪಿ ಮಣಿಸಲು ಬಿ.ಸ್.ಪಿ ಹಾಗೂ ಎಸ್.ಪಿ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಬಿಜೆಪಿ ಮಣಿಸಲು ಪ್ರಾದೇಶಿಕ ಪಕ್ಷಗಳು ಕೈಜೊಡಿಸಲಿವೆ ಎಂದೇ ಹೇಳಲಾಗುತ್ತಿತ್ತು.
ಆದರೆ ಎಸ್.ಪಿ ಜತೆ ಮೈತ್ರಿ ಮಾಡಿಕೊಳ್ಳಲು ಬಿ.ಎಸ್.ಪಿ ಮುಖ್ಯಸ್ಥೆ ಮಾಯಾವತಿ ನಿರಾಕರಿಸಿದ್ದಾರೆ. ಸಮಾಜವಾದಿ ಪಕ್ಷದ ಜತೆ ಕೈಜೋಡಿಸುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.