ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರದ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ವಿಧೇಯಕಕ್ಕೆ ಹಿರಿಯ ವಕೀಲ ಫಾಲಿ ನಾರಿಮನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೊಲೊಜಿಯಂ (ನ್ಯಾಯಾಧೀಶರ ನೇಮಕಾತಿ ಸಮಿತಿ) ವ್ಯವಸ್ಥೆಯನ್ನು ರದ್ದುಪಡಿಸುವ ನ್ಯಾಯಾಂಗ ನೇಮಕಾತಿ ಆಯೋಗವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆಯೋಗದ ನಿರ್ಧಾರವನ್ನು ಖಂಡಿಸಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ನಾರಿಮನ್ ತಿಳಿಸಿದ್ದಾರೆ.
ಕೊಲಿಜಿಯಂ ವ್ಯವಸ್ಥೆಯನ್ನು ರದ್ದುಪಡಿಸಬೇಕೇ ಅಥವಾ ಮುಂದುವರೆಸಬೇಕೆ ಎಂಬುದನ್ನು ಸುಪ್ರೀಂ ಕೋರ್ಟ್ ನಿರ್ಧರಿಸಬೇಕು ಹೊರತು ಸರ್ಕಾರವಲ್ಲ. ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಈ ಮಸೂದೆ ಅಂಗೀಕಾರವಾದರೂ ಒಪ್ಪಿಕೊಳ್ಳಬೇಕೆಂಬ ನಿಯಮ ಕಾನೂನಿನಲ್ಲಿಲ್ಲ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ತೀರ್ಮಾನವನ್ನು ಪ್ರಶ್ನಿಸಲು ನ್ಯಾಯಾಲಯದಲ್ಲಿ ಅವಕಾಶವಿದೆ. ಕೊಲಿಜಿಯಂ ವ್ಯವಸ್ಥೆ ರದ್ದುಪಡಿಸಿದರೆ ನ್ಯಾಯಾಂಗದ ಮೇಲೆ ಜನ ಇಟ್ಟಿರುವ ನಂಬಿಕೆ ಹುಸಿಯಾಗುತ್ತದೆ. ಸರ್ಕಾರದ ಈ ನಿರ್ಧಾರ ವಿವೇಚನಾರಹಿತವಾದದ್ದು ಎಂದು ಗುಡುಗಿದ್ದಾರೆ.
ಕೊಲಿಜಿಯಂ ವ್ಯವಸ್ಥೆ ರದ್ದುಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ, ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ವಿಧೇಯಕ-2014ನ್ನು ಲೋಕಸಭೆಯಲ್ಲಿ ಆ.13ರಂದು ಮಂಡಿಸಿತು. ಲೋಕಸಭೆಯಲ್ಲಿ 367 ಸದಸ್ಯರು ಮತಹಾಕುವ ಮೂಲಕ ಮಸೂದೆ ಅಂಗೀಕಾರವಾಯಿತು. ಆ.14ರಂದು ವಿಧೇಯಕ ರಾಜ್ಯಸಭೆಯಲ್ಲಿ ಅಂಗೀಕಾರವಾಗುವ ನಿರೀಕ್ಷೆಯಿದೆ.