BW News Bureau : ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಬ್ಯಾಂಕುಗಳು ಹೆಚ್ಚಿನ ನೆರವು ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
ನಗರದ ಬಹುಮಹಡಿ ಕಟ್ಟಡದಲ್ಲಿ ಸಿಂಡಿಕೇಟ್ ಬ್ಯಾಂಕ್ ನೂತನ ಶಾಖೆ ಹಾಗೂ ಎಟಿಎಂ ಸೌಲಭ್ಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾಂಕುಗಳ ಸೇವೆಗಳು ರಾಜ್ಯ ಹಾಗೂ ರಾಷ್ಟ್ರದ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿವೆ. ಇದರ ಜೊತೆಗೆ ಕೈಗಾರಿಕೆ, ಕೃಷಿ ಸಾಮಾಜಿಕ ಕ್ಷೇತ್ರಗಳಿಗೂ ಬ್ಯಾಂಕುಗಳು ಸಹಾಯ ಹಸ್ತ ನೀಡುವ ಮೂಲಕ ರಾಜ್ಯ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಕರ್ನಾಟಕ ರಾಜ್ಯ ಬ್ಯಾಂಕುಗಳ ಉಗಮ ಸ್ಥಾನವಾಗಿದೆ. ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್ ಮತ್ತಿತರ ಬ್ಯಾಂಕುಗಳು ಇಲ್ಲೇ ಹುಟ್ಟಿ ಬೆಳೆದರೂ ಜನರ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸಬೇಕಾಗಿದೆ. ಅಲ್ಲದೆ ಸಮಾಜದಲ್ಲಿರುವ ಎಲ್ಲ ವರ್ಗದ ಜನರಿಗೆ ಬ್ಯಾಂಕುಗಳ ಸೇವೆ ಲಭ್ಯವಾಗಬೇಕು. ಈ ದೃಷ್ಟಿಯಿಂದಲೇ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿದರು ಎಂದು ತಿಳಿಸಿದರು.
ಬ್ಯಾಂಕುಗಳು ಕೃಷಿಕರಿಗೆ ಕೈಗಾರಿಕೋದ್ಯಮಿಗಳಿಗೆ ಹಾಗೂ ಕಾರ್ಮಿಕರಿಗೆ ಹೆಚ್ಚು ಆರ್ಥಿಕ ಶಕ್ತಿ ತುಂಬುವುದರೊಂದಿಗೆ ಜನರ ಉಳಿತಾಯದ ಹಣವನ್ನು ಕೂಡ ಭದ್ರವಾಗಿಡುವ ಕೆಲಸ ಮಾಡುತ್ತಿವೆ ಎಂದು ತಿಳಿಸಿದರು.
ಇಡೀ ಜಗತ್ತಿನಲ್ಲಿ ಆರ್ಥಿಕ ಹಿಂಜರಿತ ಕಂಡು ಬಂದರೂ ಭಾರತಕ್ಕೆ ಇದರ ಪರಿಣಾಮ ಏನೂ ಆಗಲಿಲ್ಲ. ಇದಕ್ಕೆ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಜಾರಿಗೆ ತಂದ ಆರ್ಥಿಕ ನೀತಿಯೇ ಕಾರಣ ಎಂದರು.
ಬ್ಯಾಂಕುಗಳು ಹೆಚ್ಚಾಗಿ ಕನ್ನಡ ಭಾಷೆ ಬಳಸಬೇಕು ಎಂದ ಮುಖ್ಯಮಂತ್ರಿಗಳು, ಈ ನೆಲದ ಜನರ ಜೊತೆ ವ್ಯವಹರಿಸುವಾಗ ವ್ಯವಹರಿಸುವ ಭಾಷೆ ಸ್ಥಳೀಯ ಭಾಷೆಯಾಗಿರಬೇಕು. ಅದು ಕನ್ನಡ ಭಾಷೆಯೇ ಆಗಿರಬೇಕು ಎಂದರು.
ಸರ್ಕಾರ ಗ್ರಾಮೀಣ ಜನರಿಗೋಸ್ಕರ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿವೆ. ಈ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ದೊರೆಯುವ ನಿಟ್ಟಿನಲ್ಲಿ ಬ್ಯಾಂಕುಗಳ ನೆರವು, ಸಹಕಾರ ಅತ್ಯಗತ್ಯ ಎಂದರು.
ಸಿಂಡಿಕೇಟ್ ಬ್ಯಾಂಕ್ ಕರ್ನಾಟಕದ ನೆಲದಲ್ಲಿ ಹುಟ್ಟಿದ ಬ್ಯಾಂಕ್ ಆಗಿದ್ದು, ಹಳ್ಳಿಯಿಂದ ಪ್ರಾರಂಭವಾಗಿ ಅಂತರರಾಷ್ಟ್ರೀಯ ಮಟ್ಟದವರೆಗೂ ಬೆಳೆದ ಬ್ಯಾಂಕ್ ಆಗಿದೆ. ರಾಜ್ಯದಲ್ಲಿ ಸುಮಾರು 719 ಶಾಖೆಗಳಲ್ಲಿ ದೇಶಾದ್ಯಂತ 3300 ಶಾಖೆಗಳನ್ನು ಹೊಂದಿರುವುದು ವಿಶೇಷ ಎಂದರು.