ನವದೆಹಲಿ : ಪ್ರಸಕ್ತ ವರ್ಷದ ಕೊನೆಯಲ್ಲಿ ನಡೆಯಲಿರುವ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆ ವೇಳೆಗೆ ಚುನಾವಣಾ ಮತ್ತು ಪೊಲೀಸ್ ಸುಧಾರಣೆಗೆ ಕ್ರಮ ಕೈಗೊಳ್ಳಬೇಕೆಂದು ದೇಶದ ಪ್ರಮುಖ ನಾಗರಿಗರ ತಂಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರದ ಮೂಲಕ ಮನವಿ ಮಾಡಿದೆ.
ಮಾಜಿ ಲೋಕಸಭಾಧ್ಯಕ್ಷರಾದ ಸೋಮನಾಥ್ ಚಟರ್ಜಿ, ಮಾಜಿ ಕಾನೂನು ಸಚಿವ ರಾಮ್ ಜೇಟ್ಮಲಾನಿ, ಮಾಜಿ ಸಾಲಿಸಿಟರ್ ಜನರಲ್ ಮೋಹನ್ ಪರಾಸರನ್, ಸಿ.ಬಿ.ಐ ನ ಮಾಜಿ ನಿರ್ದೇಶಕ ಜೊಗೇಂದರ್ ಸಿಂಗ್ ಸೇರಿದಂತೆ ಹಲವು ನಿವೃತ್ತ ಸರ್ಕಾರಿ ಅಧಿಕಾರಿಗಳು ಪ್ರಧಾನಿಗೆ ಪತ್ರ ಬರೆದು ಚುನಾವಣಾ ಮತ್ತು ಪೊಲೀಸ್ ಸುಧಾರಣೆಗೆ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ. ಈ ಪತ್ರವನ್ನು ರಾಷ್ಟ್ರಪತಿ, ಉಪರಾಷ್ಟ್ರಪತಿ, ಚುನಾವಣಾ ಮುಖ್ಯ ಆಯುಕ್ತರಿಗೂ ಕಳಿಸಲಾಗಿದೆ.
ದೇಶದ ಜನತೆ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ಬಗ್ಗೆ ಅಪಾರ ನಿರೀಕ್ಷೆ ಹೊಂದಿದ್ದು, ಮೋದಿ ನೇತೃತ್ವದ ಆಡಳಿತದಲ್ಲಿ 2020ರ ವೇಳೆಗೆ ಭಾರತ ಭ್ರಷ್ಟಾಚಾರ ಮುಕ್ತ ರಾಷ್ಟ್ರವಾಗಲಿದೆ ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ವಿಶ್ವಾಸ ವ್ಯಕ್ತಪಡಿಸಲಾಗಿದೆ.
ಶೀಘ್ರವೇ ಚುನಾವಣಾ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಭ್ರಷ್ಟ ಜನಪ್ರತಿನಿಧಿಗಳು ಚುನಾವಣೆಗೆ ಸ್ಪರ್ಧಿಸದಂತೆ ಮಾಡಬೇಕೆಂದು ಪ್ರಧಾನಿ ಮೋದಿ ಅವರನ್ನು ಒತ್ತಾಯಿಸಲಾಗಿದೆ.
ಇದೇ ವೇಳೆ 2006ರ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಮಾಡೆಲ್ ಪೊಲೀಸ್ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಪೊಲೀಸ್ ಇಲಾಖೆಯಲ್ಲಿಯೂ ಸುಧಾರಣೆ ತರಬೇಕಿದೆ ಎಂದು ಈ ತಂಡದ ಸದಸ್ಯರ್ಯ್ ಒತ್ತಾಯಿಸಿದ್ದಾರೆ. ದೇಶಕ್ಕೆ ಜನರ ಪರವಾಗಿರುವ ಪೊಲೀಸರು ಅಗತ್ಯವಿದ್ದಾರೆಯೇ ಹೊರತು ಆಳುವವರ ಪರ ಇರುವ ಪೊಲೀಸರ ಅಗತ್ಯವಿಲ್ಲ ಎಂದು ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.