ನವದೆಹಲಿ : ಹೆಸರಾಂತ ಇತಿಹಾಸಕಾರ ಬಿಪನ್ ಚಂದ್ರ(86) ಅವರು ಆ.30ರಂದು ನಿಧನರಾಗಿದ್ದಾರೆ. ನಿದ್ದೆಯಲ್ಲಿರುವಾಗಲೇ ಏಕಾಏಕಿ ಸಾವನ್ನಪ್ಪಿದ್ದಾರೆ ಎಂದು ಕುಟುಂಬ ಸದಸ್ಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಆ.30ರ ಬೆಳಿಗ್ಗೆ 6 ಗಂಟೆ ವೇಳೆಗೆ ಬಿಪನ್ ಚಂದ್ರ ನಿದ್ದೆಯಲ್ಲೇ ಗುರಗಾಂವ್ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ಕೆಲವು ತಿಂಗಳಿನಿಂದ ಬಿಪನ್ ಚಂದ್ರ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು ಎಂದು ಹೇಳಲಾಗಿದೆ.
ಹಿಮಾಚಲ ಪ್ರದೇಶದ ಕಂಗರಾ ಕಣಿವೆಯ ಪ್ರದೇಶದಲ್ಲಿ 1928ರಲ್ಲಿ ಜನಿಸಿದ್ದ ಬಿಪನ್ ಚಂದ್ರ ಆಧುನಿಕ ಭಾರತದ ಪ್ರಸಿದ್ಧ ರಾಜಕೀಯ ಹಾಗೂ ಅರ್ಥಶಾಸ್ತ್ರದ ಇತಿಹಾಸಕಾರರಾಗಿದ್ದರು. ಅಲ್ಲದೇ ಸ್ವಾತಂತ್ರ್ಯ ಚಳುವಳಿ ವೇಳೆ ಮಹಾತ್ಮಾ ಗಾಂಧಿ ಅವರನ್ನು ಹತ್ತಿರದಿಂದ ಬಲ್ಲವರಾಗಿದ್ದ ವಿದ್ವಾಂಸರ ಪೈಕಿ ಬಿಪನ್ ಚಂದ್ರ ಅವರು ಪ್ರಮುಖರಾಗಿದ್ದರು.
ಭಾರತದ ರಾಜಕೀಯ ಇತಿಹಾಸದ ಬಗ್ಗೆ ಇವರು ಹಲವು ಪುಸ್ತಕಗಳನ್ನು ಬರೆದಿದ್ದಾರೆ. 1993ರಲ್ಲಿ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಸದಸ್ಯರಾಗಿದ್ದ ಇವರು ಕಮ್ಯುನಿಷ್ಟ್ ವಿಚಾರಧಾರೆಗಳನ್ನು ಬಲವಾಗಿ ಪ್ರತಿಪಾದಿಸಿದ್ದರು. ಬಿಪನ್ ಚಂದ್ರ ಅವರು ಬರೆದ ಪುಸ್ತಕಗಳನ್ನು ಶಾಲೆಗಳಲ್ಲಿ ಗುಣಮಟ್ಟದ ಇತಿಹಾಸ ಪಠ್ಯ ಎಂದು ಶಿಫಾರಸು ಮಾಡಲಾಗಿತ್ತು. ಅಗಲಿದ ಇತಿಹಾಸಗಾರರಿಗೆ ಪದ್ಮಭೂಷಣ ಪ್ರಶಸ್ತಿಯೂ ಲಭಿಸಿದೆ. ಬಿಪನ್ ಚಂದ್ರ ಅವರ ಅಂತ್ಯಕ್ರಿಯೆಯನ್ನು ನವದೆಹಲಿಯಲ್ಲಿ ನಡೆಸಲಾಗುತ್ತದೆ.