ನವದೆಹಲಿ : ತೀವ್ರ ವಿರೋಧದ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ, ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾ.ಪಿ.ಸದಾಶಿವಂ ಅವರನ್ನು ಕೇರಳ ರಾಜ್ಯಪಾಲರನ್ನಾಗಿ ನೇಮಕ ಮಾಡಿದೆ.
ಪಿ.ಸದಾಶಿವಂ ಅವರನ್ನು ಕೇರಳ ರಾಜ್ಯಪಾಲರನ್ನಾಗಿ ನೇಮಕ ಮಾಡುವಂತೆ ಕೇಂದ್ರ ಸರ್ಕಾರ ಕಳುಹಿಸಿದ್ದ ಶಿಫಾರಸಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಹಿ ಹಾಕಿದ್ದಾರೆ. ಸೆ.5ರಂದು ಸದಾಶಿವಂ ಕೇರಳ ರಾಜ್ಯಪಾಲರಾಗಿ ಪದಗ್ರಹಣಮಾಡಲಿದ್ದಾರೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಹುದ್ದೆಯಲ್ಲಿದ್ದವರು ರಾಜ್ಯಪಾಲರ ಹುದ್ದೆ ಅಲಂಕರಿಸುತ್ತಿರುವುದು ಇದೇ ಮೊದಲಬಾರಿಯಾಗಿದ್ದು, ಮೋದಿ ಸರ್ಕಾರದಿಂದ ನೇಮಕಗೊಂಡ ಮೊದಲ ರಾಜಕೀಯೆತರ ರಾಜ್ಯಪಾಲರೆನಿಸಿದ್ದಾರೆ.
ಸೊಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಅಮಿತ್ ಶಾ ವಿರುದ್ಧದ ಎಫ್.ಐ.ಆರ್ ನ್ನು ಸದಾಶಿವಂ ರದ್ದುಗೊಳಿಸಿದ್ದರು. ಅದಕ್ಕಾಗಿ ಕೇಂದ್ರ ಸರ್ಕಾರ ಈ ಬಳುವಳಿ ನೀಡುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪಿ.ಸದಾಶಿವಂ, ನನ್ನ ನೇಮಕದಲ್ಲಿ ಯಾವುದೇ ವಿವಾದವಿಲ್ಲ, ರಾಜ್ಯಪಾಲರ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಿ ಕೇರಳ ಜನತೆಯ ಸೇವೆ ಮಾಡುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.