ಜಮ್ಮು-ಕಾಶ್ಮೀರ : ಜಮ್ಮು-ಕಾಶ್ಮೀರದಲ್ಲಿ ಮಳೆ ನಿಂತಿದ್ದರೂ ಪ್ರವಾಹ ಪರಿಸ್ಥಿತಿ ತಹಬದಿಗೆ ಬಂದಿಲ್ಲ. ಪ್ರವಾಹದಲ್ಲಿ ಸಿಲುಕಿದವರನ್ನು ರಕ್ಷಿಸಲು ಸೇನಾ ಕಾರ್ಯಾಚರಣೆ ಮುಂದುವರೆದಿದೆ.
ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಸೇನಾ ಸಿಬ್ಬಂದಿಗಳು, ಪ್ರವಾಹದಲ್ಲಿ ಸಿಲುಕಿದವರನ್ನು ರಕ್ಷಿಸಲು ಹರಸಾಹಸ ಪಡುತ್ತಿದ್ದಾರೆ. ಇದೇ ವೇಳೆ ಪೂಂಚ್ ಜಿಲ್ಲೆಯಲ್ಲಿ ವಾಹನ ಸಂಚಾರ ಸುಗಮವಾಗಲು ಹೊಸದಾಗಿ ಬ್ರಿಡ್ಜ್ ನಿರ್ಮಾಣ ಮಾಡಲಾಗಿದ್ದು ಇಂದಿನಿಂದ ವಾಹನಗಳು ಸಂಚರಿಸಲು ಅವಕಾಶ ನೀಡಲಾಗಿದೆ.
ಪ್ರವಾಹಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆ 200ರ ಗಡಿ ದಾಟಿದೆ ಎಂದು ಜಮ್ಮು-ಕಾಶ್ಮೀರ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಕ್ಷಿಸಲಾಗಿರುವ ಪ್ರವಾಹ ಸಂತ್ರಸ್ತರನ್ನು ಉಚಿತವಾಗಿ ದೆಹಲಿಗೆ ತಲುಪಿಸಲಾಗುತ್ತಿದೆ. ಈ ವರೆಗೂ 50 ಸಾವಿರ ಜನರನ್ನು ರಕ್ಷಿಸಲಾಗಿದ್ದು ಇನ್ನೂ 6 ಲಕ್ಷ ಜನರನ್ನು ರಕ್ಷಿಸಬೇಕಿದೆ. ಇದೇ ವೇಳೆ ಬೆಂಗಳೂರು ಮೂಲದ 9 ನಾಗರಿಕರನ್ನು ರಕ್ಷಿಸಲಾಗಿದೆ.