BW News Bureau : ಬೆಂಗಳೂರು ಉತ್ತರ ತಾಲ್ಲೂಕಿನ ಯಲಹಂಕ ಹೋಬಳಿಯ ತಿರುಮೇನಹಳ್ಳಿಯಲ್ಲಿ ನಿರ್ಮಿಸಲಾಗುತ್ತಿರುವ ಹಜ್ಘರ್ಗಾಗಿ ಪ್ರಸಕ್ತ ವರ್ಷದ ಆಯವ್ಯಯದಲ್ಲಿ 17 ಕೋಟಿ ರೂ ಅನುದಾನವನ್ನು ಒದಗಿಸಲಾಗಿದೆ. ಮುಂದಿನ ವರ್ಷ ಹಜ್ ಶಿಬಿರ ಈ ನೂತನ ಹಜ್ಘರ್ನಲ್ಲೇ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ 2014ರ ಹಜ್ ಯಾತ್ರೆಗೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಗುಲ್ಬರ್ಗ ಹಾಗೂ ಮಂಗಳೂರಿನಲ್ಲಿ ತಲಾ ಎರಡು ಎಕರೆ ಜಾಗದಲ್ಲಿ ನಿರ್ಮಿಸಲಾಗುತ್ತಿರುವ ಹಜ್ ಘರ್ಗಳಿಗೂ ತಲಾ ಒಂದು ಕೋಟಿ ಅನುದಾನ ಪ್ರಕಟಿಸಲಾಗಿದೆ ಎಂದು ತಿಳಿಸಿದರು.
ಮಕ್ಕಾ ಪಟ್ಟಣದ ಪವಿತ್ರ ಕಾಬಾ ಮಸೀದಿ ವಿಸ್ತರಣಾ ಕಾರ್ಯವು ನಡೆಯತ್ತಿರುವ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದ ಸರ್ಕಾರವು ವಿಶ್ವದ ಎಲ್ಲಾ ದೇಶಗಳಿಂದ ಹಜ್ ಯಾತ್ರೆಗೆ ಆಗಮಿಸುವ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಶೇಕಡಾ 20 ರಷ್ಟು ಕಡಿತಗೊಳಿಸಿದೆ. ಅಂತೆಯೇ ಭಾರತದ ಯಾತ್ರಿಗಳ ಸಂಖ್ಯೆಯೂ ಕಡಿಮೆಯಾಗಿದೆ. ರಾಜ್ಯದಿಂದ 5193 ಯಾತ್ರಿಗಳು ತೆರಳಲಿದ್ದಾರೆ. ಮಂಗಳೂರಿನಿಂದ ಈಗಾಗಲೇ 731 ಮಂದಿ ಯಾತ್ರೆಗೆ ತೆರಳಿದ್ದಾರೆ. ಅಲ್ಲದೆ ರಾಜ್ಯದ ಯಾತ್ರಿಗಳು ಗೋವಾ ವಿಮಾನ ನಿಲ್ದಾಣದ ಮೂಲಕ, ಹೈದರಾಬಾದ್ ವಿಮಾನ ನಿಲ್ದಾಣದ ಮೂಲಕವೂ ಯಾತ್ರೆಗೆ ತೆರಳಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಮೂಲಸೌಕರ್ಯ ಅಭಿವೃದ್ಧಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಹಾಗೂ ಹಜ್ ಸಚಿವ ಆರ್.ರೋಷನ್ ಬೇಗ್ ಅವರು ತಿರುಮೇನಹಳ್ಳಿಯಲ್ಲಿ ನಿರ್ಮಿಸಲಾಗುತ್ತಿರುವ ಹಜ್ಘರ್ನಲ್ಲಿ ಪರಸ್ಥಳದ ಮುಸ್ಲಿವ್ಮರಿಗೆ ವಾಸ್ತವ್ಯದ ಸೌಲಭ್ಯ ಹಾಗೂ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ವರ್ಷವಿಡೀ ಹಮ್ಮಿಕೊಳ್ಳಾಗುವುದು ಎಂದು ತಿಳಿಸಿದರು.
ಪವಿತ್ರ ಹಜ್ ಯಾತ್ರಿಗಳನ್ನು ಕರೆದೊಯ್ಯಲು ಹಜ್ ಸಮಿತಿಗಳಿಗೆ ನಿಗದಿ ಪಡಿಸಿದ್ದಕ್ಕಿಂದ ಖಾಸಗಿಯವರ ಕೋಟಾ ಹೆಚ್ಚಿದೆ. ಇದರಿಂದ ಬಡಜನರು ಅವಕಾಶ ವಂಚಿತರಾಗುತ್ತಿದ್ದಾರೆಂದು ಅವರು ವಿಷಾದಿಸಿದರು.