ನವದೆಹಲಿ : ದ್ವಿಪಕ್ಷೀಯ ಮಾತುಕತೆ ನಡುವೆಯೇ ಗಡಿ ಭಾಗದಲ್ಲಿ ಆಕ್ರಮಣ ಮಾಡುವ ಚೀನಾ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿಗೆ ಸಮಾಜವಾದಿ ಪಕ್ಷದ ನಾಯಕರು ಎಚ್ಚರಿಸಿದ್ದಾರೆ.
ಸೆ.18ರಂದು ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ನಡುವೆ ದ್ವಿಪಕ್ಷೀಯ ಮಾತುಕತೆ ನಡೆದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ನಾಯಕ ರಾಮ್ ಗೋಪಾಲ್ ಯಾದವ್, ಚೀನಾ ವಿಷಯದಲ್ಲಿ ಸಮಾಜವಾದಿ ಪಕ್ಷದ ನಿಲುವು ಸ್ಪಷ್ಟವಾಗಿದ್ದು ನಾವೆಂದೂ ಚೀನಾ ದೇಶವನ್ನು ನಂಬುವುದಿಲ್ಲ. ಚೀನಾದವರು ಹಿಂದಿ-ಚೀನಿ ಭಾಯಿ ಭಾಯಿ ಎಂದು ಹೇಳಿಕೊಂಡೇ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಾರೆ. ಇದೀಗ ಚೀನಾ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಬೀಚಿಂಗ್ ನಲ್ಲಿ ಅರುಣಾಚಲ ಪ್ರದೇಶ ನಮ್ಮದೆಂಬ ಕೂಗು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಮೋದಿ ಸರ್ಕಾರ ಚೀನಾವನ್ನು ನಂಬಬಾರದು ಎಂದು ಸಮಾಜವಾದಿ ಪಕ್ಷ ಹೇಳಿದೆ.
ಒಳ ನುಸುಳುವಿಕೆಯಲ್ಲಿ ನಿರತವಾಗಿರುವ ಚೀನಾಗೆ ಅದರದ್ದೇ ಭಾಷೆಯಲ್ಲಿ ಉತ್ತರ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸುತ್ತೇವೆ ಎಂದು ರಾಮ್ ಗೋಪಾಲ್ ಯಾದವ್ ಹೇಳಿದ್ದಾರೆ.
ಚೀನಾ ಅಧ್ಯಕ್ಷ ಭಾರತಕ್ಕೆ ಆಗಮಿಸಿದ ಬೆನ್ನಲ್ಲೇ ಲಡಾಕ್ ಗಡಿಯಲ್ಲಿ ಚೀನಾ ಪಡೆ ಭಾರತದ ಗಡಿಯೊಳಗೆ ಒಳ ನುಸುಳಿತ್ತು. ಲಡಾಕ್ ನ ಅಂತರಾಷ್ಟ್ರೀಯ ಗಡಿಯಲ್ಲಿ ಭಾರತದ ಗಡಿರೇಖೆಯಲ್ಲಿ ಸುಮಾರು 4-5 ಕಿ.ಮೀ ನಷ್ಟು ದೂರದವರೆಗೆ ಚೀನಾ ಸೇನೆಯ ಸಾವಿರಕ್ಕೂ ಹೆಚ್ಚು ಯೋಧರು ಒಳ ನುಸುಳಿದ್ದರು.