BW News Bureau : ಉತ್ತರಾ ಮಳೆಯ ಅಬ್ಬರಕ್ಕೆ ಸಿಲಿಕಾನ್ ಇಟಿ ಬೆಂಗಳೂರು ಸಂಪೂರ್ಣ ತತ್ತರಗೊಂಡಿದೆ. ಸಂಜೆಯ ವೇಳೆ ಸುರಿದ ಧಾರಾಕಾರ ಮಳೆಗೆ ನಗರದ ಜನಜೀವನ ಅಸ್ತವ್ಯಸ್ತಗೊಂಡಿದೆ. ವರ್ಷದ ಅತಿದೊಡ್ಡ ಮಳೆಯಾಗಿದ್ದು, ಇದರಿಂದ ಭಾಗಶ: ಬೆಂಗಳೂರು ಜಾವೃತಗೊಂಡಿತು.
ಪ್ರಸಕ್ತ ಮುಂಗಾರಿನ ಜೂನ್ ಸೆಪ್ಟೆಂಬರ್ ಅವಧಿಯಲ್ಲಿ ಸುರಿದ ಅತ್ಯಧಿಕ ಮಳೆಯ ಕಾರಣಕ್ಕೆ ಇಡೀ ನಗರ ದಿಢೀರ್ ನೆರೆ ಹಾವಳಿಗೆ ತುತ್ತಾದಂತೆ ಭಾಸವಾಯಿತು.
ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ, ಮೂರಕ್ಕೂ ಹೆಚ್ಚು ಬಿಎಂಟಿಸಿ ಬಸ್ ಗಳು ನೀರಿನಲ್ಲಿ ಮುಳುಗಿದ್ದು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ರಸ್ತೆಗಳ ತುಂಬೆಲ್ಲಾ ನೀರು ಹರಿದು, ವಾಹನಗಳು ನೀರಿನಲ್ಲಿ ಮುಳುಗಡೆಯಾಗಿವೆ. ವಾಹನ ಸವಾರರು ಪರದಾಡು ಸ್ಥಿತಿ ನಿರ್ಮಾಣಗೊಂಡಿದೆ.
ಹಲವೆಡೆ ಮರಗಳು ಧರಾಶಾಹಿಯಾಗಿ ಉರುಳಿಬಿದ್ದು, ಸಂಚಾರಕ್ಕೆ ಅಡಚಣಿ ಉಂಟಾಯಿತು. ಹಲವಾರು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಕಾಂಪೋಂಡ್ ಗೋಡೆಗಳು ಕುಸಿದು ಬಿದ್ದಿವೆ. ರಾತ್ರಿ 10ರ ಸುಮಾರಿಗೆ ನಗರದ ಕಾಟನ್ ಪೇಟೆಯಲ್ಲಿ ಗರಿಷ್ಠ 106 ಮಿ.ಮೀ ಮಳೆ ದಾಖಲಾಗಿದೆ. ಈ ಹಿಂದೆ 100 ಮಿ.ಮೀ ಮಳೆಯಾದ ದಾಖಲೆಯಿತ್ತು ಎಂದು ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದೆರಡು ದಿನಗಳಿಂದ ರಾತ್ರಿ ವೇಳೆ ಬಂದುಹೋಗುತ್ತಿದ್ದ ಮಳೆರಾಯ ಸೆ.25ರಂದು ಸಂಜೆ ತನ್ನ ಆಟಾಟೋಪ ಮೆರೆದಿದ್ದಾನೆ. ಪರಿಣಾಮ ಕೆಲ ಹೊತ್ತಿನಲ್ಲೇ ಮೋರಿ ಮತ್ತು ರಸ್ತೆಗಳು ಒಂದೆ ಆಗಿವೆ. ಹಲವೆಡೆ ಕರಂಟ್ ಕಂಬಗಳ ಮೇಲೆ ಮರಗಳು ಉರುಳಿದ ಪರಿಣಾಮ ಕತ್ತಲು ಆವರಿಸಿತ್ತು. ರಸ್ತೆಗಳಲ್ಲೇ ಸುಮಾರು ಮೂರು ಅಡಿ ನೀರು ನಿಂತ ಪರಿಣಾಮ ವಾಹನ ಸಂಚಾರ ಸಂಪೂರ್ಣ ಸ್ಥಬ್ದಗೊಂಡಿತು.
ಮನೆಗಳಿಗೆ ನೀರು ನುಗ್ಗಿದ್ದರಿಂದ ಜನತೆ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಿಗ್ಗೆ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಮೇಯರ್ ಶಾಂತಕುಮಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಧ್ಯಾಹ್ನ ಬಿಬಿಎಂಪಿ ಕಛೇರಿಯಲ್ಲಿ ಅಧಿಕಾರಿಗಳ ಸಭೆ ನಡೆಯಲಿದೆ.