ನ್ಯೂಯಾರ್ಕ್ : ಜಮ್ಮು-ಕಾಶ್ಮೀರ ವಿಚಾರವನ್ನು ಅಂತರಾಷ್ಟ್ರೀಯಗೊಳಿಸುವ ಪಾಕಿಸ್ತಾನದ ಯತ್ನಕ್ಕೆ ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆಯಲ್ಲಿ ತಿರುಗೇಟು ನೀಡಿದ್ದಾರೆ.
ವಿಶ್ವಸಂಸ್ಥೆಯ ಮಹಾಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಯೋತ್ಪಾದನೆಯ ಕರಿನೆರಳಲ್ಲಿ ಮಾತುಕತೆ ಅಸಾಧ್ಯ. ಒಂದು ವೇಳೆ ಉಗ್ರವಾದವನ್ನು ಬದಿಗೊತ್ತಿ ಮಾತುಕತೆಗೆ ಸೂಕ್ತ ವಾತಾವರಣವನ್ನು ಕಲ್ಪಿಸಿದ್ದೇ ಆದಲ್ಲಿ ನೆರೆಯ ರಾಷ್ಟ್ರದ ಜೊತೆ ಮಾತುಕತೆಗೆ ಸಿದ್ಧ ಎಂದು ಘೋಷಿಸಿದ್ದಾರೆ.
35ನಿಮಿಷಗಳ ಕಾಲ ಹಿಂದಿಯಲ್ಲಿ ಭಾಷಣ ಮಾಡಿದ ಮೋದಿ, ನೆರೆಹೊರೆಯ ರಾಷ್ಟ್ರಗಳಗೊಂದಿಗೆ ನಾವು ಸ್ನೇಹ ಸಂಪಾದಿಸಲು ಬಯಸುತ್ತೇವೆ. ಆದರದು ಶಾಂತಿಯುತ ವಾತಾವರಣದಲ್ಲಿ ನಡೆಯುವಂತಾಗಬೇಕು ಎಂದು ಹೇಳಿದ್ದಾರೆ.
ಭಯೋತ್ಪಾದನೆಯ ಕರಿನೆರಳಿನಲ್ಲಿ ಮಾತುಕತೆ ನಡೆಸುವುದು ಪ್ರಯೋಜನವಾಗಲ್ಲ, ಒಂದುವೇಳೆ ಇಂತಹ ವಾತಾವರಣ ನಿರ್ಮಿಸಲು ಪಾಕಿಸ್ತಾನ ಮುಂದಾದರೆ, ನೆರೆಯ ರಾಷ್ಟ್ರದೊಂಡಿಗೆ ಗಂಭೀರ ಸ್ವರೂಪದ ದ್ವಿಪಕ್ಷೀಯ ಮಾತುಕತೆಗೆ ಸಿದ್ಧ ಎಂದು ತಿಳಿಸಿದರು.
ದೇಶ, ಗಡಿಯನ್ನು ದಾಟಿ ಬೆಳೆಯುತ್ತಿರುವ ಉಗ್ರವಾದವನ್ನು ಮೆಟ್ಟಿನಿಲ್ಲಲು ವಿಶ್ವದ ಎಲ್ಲಾ ರಾಷ್ಟ್ರಗಳು ಒಂದುಗೂಡಿ ಹೋರಾಟ ನಡೆಸಬೇಕಾದ ಅಂಶವನ್ನು ಇದೇ ವೇಳೆ ಪ್ರಧಾನಿ ಮೋದಿ ಪ್ರತಿಪಾದಿಸಿದ್ದಾರೆ.
ವಿಶ್ವಸಂಸ್ಥೆಯಂಥಹ ಅತ್ಯುತ್ತಮ ಸಂಘಟನೆ ನಮ್ಮ ಮುಂದೆ ಇದ್ದರೂ, ಜಿ5, ಜಿ7, ಜಿ 20ಯಂಥಹ ಸಂಘಟನೆಗಳನ್ನು ಸೃಷ್ಟಿಸುತ್ತಿರುವುದನ್ನು ಪ್ರಶ್ನಿಸಿದ ಪ್ರಧಾನಿ ಮೋದಿ, ನಾವೇಕೆ ಜಿ ಫಾರ್ ಆಲ್ ಎಂಬ ಪರಿಕಲ್ಪನೆಯನ್ನು ಮುಂದಿಟ್ಟುಕೊಂಡು ಜಗತ್ತಿನ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬಾರದು, ಈ ಬಗ್ಗೆ ವಿಶ್ವನಾಯಕರು ಚಿಂತನೆನಡೆಸಬೇಕು ಎಂದು ಸಲಹೆ ನೀಡಿದರು.
ಸೆ.25ರಂದು ವಿಶ್ವಸಂಸ್ಥೆಯಲ್ಲಿ ಪಾಕ್ ಪ್ರಧಾನಿ ನವಾಜ್ ಷರೀಫ್ ಕಾಶ್ಮೀರ ವಿಚಾರ ಪ್ರಸ್ತಾಪಿಸುವ ಮೂಲಕ ಮತ್ತೊಮ್ಮೆ ಜಗಳಕ್ಕೆ ಇಳಿಯುವ ಯತ್ನ ನಡೆಸಿದ್ದರು. ಇದಕ್ಕೆ ತಮ್ಮದೇ ಆದ ರೀತಿಯಲ್ಲಿ ಪ್ರತ್ಯುತ್ತರ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನದ ಹೆಸರನ್ನು ಹೇಳದಯೇ ಆ ರಾಷ್ಟ್ರ ಭಯೋತ್ಪಾದನೆಗೆ ನೆರವು ನೀಡುತ್ತಿರುವ ಹಾಗೂ ಉಗ್ರ ಚಟುವಟಿಕೆಗಳಿಗೆ ನೆಲೆಯಾಗಿರುವ ಸಂಗತಿಯನ್ನು ಜಗತ್ತಿಗೆ ತೆರೆದಿಡುವ ಯತ್ನ ಮಾಡಿದರು.