ಚೆನ್ನೈ : ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಬಿಡುಗಡೆಗೆ ಆಗ್ರಹಿಸಿ ಎಐಎಡಿಎಂಕೆ ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನೆಯನ್ನು ಡಿಎಂಡಿಕೆ ಮುಖ್ಯಸ್ಥ, ನಟ ವಿಜಯಕಾಂತ್ ಖಂಡಿಸಿದ್ದಾರೆ.
ಎಐಎಡಿಎಂಕೆ ಕಾರ್ಯಕರ್ತರು ತಮಿಳುನಾಡಿನಾಧ್ಯಂತ ಪ್ರತಿ ದಿನ ಪ್ರತಿಭಟನೆ ನಡೆಸುತ್ತಿದ್ದು, ಇದರಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾಗಿದೆ. ರಾಜ್ಯದ ಜನತೆ ಪ್ರತಿಭಟನೆಯಿಂದ ನಲುಗಿ ಹೋಗಿದ್ದಾರೆ ಎಂದು ತಿಳಿಸಿದ್ದಾರೆ.
ವಾಣಿಜ್ಯ ವಹಿವಾಟಿನ ಮೇಲೂ ಪ್ರತಿಭಟನೆಯ ಪರಿಣಾಮ ಬೀರಿದ್ದು, ರಾಜ್ಯದಲ್ಲಿ ಪ್ರಭಟನೆಯಿಂದಾಗಿ ಪ್ರತಿ ದಿನ 5 ಸಾವಿರ ಕೋಟಿ ರೂ ನಷ್ಟ ಉಂಟಾಗುತ್ತಿದೆ. ಜಯಲಲಿತಾ ಅವರ ತಪ್ಪು ಮುಚ್ಚಿ ಹಾಕಲು ಇಂತಹ ಪ್ರತಿಭಟನೆ ನಡೆಯುತ್ತಿದೆ ಎಂದು ಗರಂ ಆಗಿ ನುಡಿದಿದ್ದಾರೆ.
ಜಯಲಲಿತಾ ಅವರು ತಪ್ಪು ಮಾಡಿಲ್ಲ ಎಂದಾದರೆ, ನ್ಯಾಯಾಲಯದಲ್ಲಿ ಸಾಬೀತು ಪಡಿಸಲು ಯಾಕೆ ವಿಫರಾದರು ಎಂದು ಜಯಲಲಿತಾ ಬೆಂಬಲಿಗರಿಗೆ ವಿಜಯಕಾಂತ್ ಪ್ರಶ್ನೆ ಮಾಡಿದ್ದಾರೆ. ಈ ರೀತಿ ಪ್ರತಿಭಟನೆಯಿಂದ ತಮಿಳರು, ಕನ್ನಡಿಗರ ಮಧ್ಯೆ ವೈಷಮ್ಯ ಹರಡುವಂತೆ ಮಾಡಲಾಗುತ್ತಿದ್ದು, ಇಂತಹ ಬೆಳವಣಿಗೆಯನ್ನು ತಕ್ಷಣ ತಡೆಯಬೇಕು ಎಂದು ಮನವಿ ಮಾಡಿದ್ದಾರೆ.
ಅಕ್ರಮ ಆಸ್ತಿಗಳಿಕೆ ಪ್ರಕರಣ ಸಾಬೀತಾದ ಹಿನ್ನಲೆಯಲ್ಲಿ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ಜಯಲಲಿತಾ ಅವಿರಿಗೆ ಜೈಲು ಶಿಕ್ಷೆ ನೀಡಿ ಅದೇಶ ನೀಡಿತ್ತು.