ನವದೆಹಲಿ : ಹಿರಿಯ ಪತ್ರಕರ್ತ ಎಂ.ವಿ ಕಾಮತ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
ಟ್ವಿಟರ್ ಮೂಲಕ ಸಂತಾಪ ಸೂಚಿಸಿರುವ ಪ್ರಧಾನಿ ಮೋದಿ, ಎಂ.ವಿ ಕಾಮತ್ ಅವರ ನಿಧನ ಸಾಹಿತ್ಯ ಮತ್ತು ಪತ್ರಿಕೋದ್ಯಮ ಜಗತ್ತಿಗೆ ತುಂಬಲಾರದ ನಷ್ಟ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದ್ದಾರೆ. ಎಂ.ವಿ ಕಾಮತ್ ಅವರೊಂದಿಗೆ ನಡೆಸಿದ್ದ ಹಲವು ಸಂವಾದಗಳು ನೆನಪಿಗೆ ಬರುತ್ತಿವೆ, ಎಂ.ವಿ ಕಾಮತ್ ಅವರು ಜ್ಞಾನದ ಭಂಡಾರದಂತಿದ್ದರು ಎಂದು ಮೋದಿ ಅಗಲಿದ ಪತ್ರಕರ್ತನನ್ನು ಸ್ಮರಿಸಿದ್ದಾರೆ.
ಪ್ರಸಾರ ಭಾರತಿ ಬೋರ್ಡ್ ನ ಮಾಜಿ ಅಧ್ಯಕ್ಷ, ಹಿರಿಯ ಪತ್ರಕರ್ತ ಎಂ.ವಿ ಕಾಮತ್ ಅ.9ರಂದು ಮಣಿಪಾಲದಲ್ಲಿ ನಿಧನರಾಗಿದ್ದಾರೆ. ದಿ.ಕಾಮತ್ ಅವರು, ನರೇಂದ್ರ ಮೋದಿ-ದ ಆರ್ಕಿಟೆಕ್ಟ್ ಆಫ್ ಎ ಮಾಡರ್ನ್ ಸ್ಟೇಟ್ ಎಂಬ ಪುಸ್ತಕ ಬರೆದಿದ್ದರು.
1921 ಸೆಪ್ಟೆಂಬರ್ 7ರಂದು ಉಡುಪಿಯಲ್ಲಿ ಜನಿಸಿದ ಕಾಮತ್ ಪತ್ರಿಕೋದ್ಯಮ ಪ್ರವೇಶಿಸುವುದಕ್ಕೂ ಮುನ್ನ ರಸಾಯನಶಾಸ್ತ್ರಜ್ಞನಾಗಿ ಕಾರ್ಯನಿರ್ವಹಿಸಿದ್ದರು. ಮುಂಬೈನಲ್ಲಿ ಫ್ರೀ ಪ್ರೆಸ್ ಜರ್ನಲ್ ನಲ್ಲಿ ವರದಿಗಾರರಾಗಿ ವೃತ್ತಿ ಜೀವನ ಪ್ರಾರಂಭಿಸಿದ್ದ ಇವರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದರು.