ಮಡಿಕೇರಿ : 'ಮಹಾರಾಷ್ಟ್ರ'-ಹರ್ಯಾಣ ರಾಜ್ಯಗಳಲ್ಲಿ ಬಿಜೆಪಿಗೆ ಬಹುಮತ ದೊರೆತಿರುವುದು ಆಡಳಿತ ವಿರೋಧಿ ಅಲೆಯಿಂದಲೇ ಹೊರತು ಪ್ರಧಾನಿ ನರೇಂದ್ರ ಮೋದಿ ಪರ ಅಲೆಯಿಂದ ಅಲ್ಲ ಎಂದು ಮಾಜಿ ಸಂಸದ ಹೆಚ್ ವಿಶ್ವನಾಥ್ ಹೇಳಿದ್ದಾರೆ.
ಅ.20ರಂದು ಮಡಿಕೇರಿಯಲ್ಲಿ ಮಾತನಾಡಿದ ವಿಶ್ವನಾಥ್, ರಾಜ್ಯದ ಜನರು ಮತ ನೀಡಿರುವುದು ಕಾಂಗ್ರೆಸ್ ಆಡಳಿತಕ್ಕೆ ವಿರುದ್ಧವಾಗಿಯೇ ಹೊರತು ಮೋದಿ ಆಡಳಿತದ ಪರವಾಗಿ ಅಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ನರೇಂದ್ರ ಮೋದಿಗೆ ಹೆಚ್ಚು ಸಾಮರ್ಥ್ಯವಿಲ್ಲ ಆದರೆ, ಅವರಿಗೆ ಗಂಭೀರತೆ ಇದೆ, ರಾಹುಲ್ ಗಾಂಧಿ ಅವರಿಗೆ ಗಂಭೀರತೆ ಇಲ್ಲ ಆದರೆ, ಪಕ್ಷವನ್ನು ನಿಭಾಯಿಸುವ ಸಾಮರ್ಥ್ಯವಿದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ಹಾಗೂ ಹರ್ಯಾಣ ಸೋಲಿನ ನಂತರ ಕಾರ್ಯಕರ್ತರಲ್ಲಿ ಪ್ರಿಯಾಂಕ ಗಾಂಧಿ ಅವರನ್ನು ಸಕ್ರಿಯ ರಾಜಕಾರಣಕ್ಕೆ ಕರೆ ತನ್ನಿ ಎಂಬ ಕೂಗು ಹೆಚ್ಚುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಕಳೆದ ಲೋಕಸಭಾ ಚುನಾವಣೆಯ ಸೋಲಿನ ನಂತರ ಪಕ್ಷಕ್ಕೆ ನಾನು ಹಲವು ಸಲ ಪ್ರಿಯಾಂಕ ಗಾಂಧಿ ಅವರನ್ನು ಸಕ್ರಿಯವಾಗಿ ರಾಜಕಾರಣಕ್ಕೆ ತನ್ನಿ ಎಂದು ಹೇಳಿದ್ದೆ, ಆದರೆ ಪಕ್ಷ ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ ಎಂದರು.