ನವದೆಹಲಿ : ಸರ್ದಾರ್ ವಲ್ಲಭಬಾಯಿ ಪಟೇಲರ ಜನ್ಮದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಏಕತಾ ಓಟಕ್ಕೆ ಚಾಲನೆ ನೀಡಿದ್ದಾರೆ.
ನವದೆಹಲಿಯ ಪಟೇಲ್ ಚೌಕ್ ನಲ್ಲಿನ ಸರ್ದಾರ್ ವಲ್ಲಭಬಾಯ್ ಪಟೇಲರ ಪ್ರತಿಮೆಗೆ ಪ್ರಧಾನಿ ನರೇಂದ್ರ ಮೋದಿ ಪುಷ್ಪ ನಮನ ಸಲ್ಲಿಸಿದರು.
ಬಳಿಕ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು,ಸರ್ದಾರ್ ವಲ್ಲಭಬಾಯ್ ಪಟೇಲರು ಆಧುನಿಕ ಭಾರತದ ನಿಜವಾದ ಶಿಲ್ಪಿ. ಅವರ ಜೀವನ ಧರ್ಮ ಆದರ್ಶಗಳಿಂದ ಕೂಡಿತ್ತು ಎಂದು ಅಭಿಪ್ರಾಯಪಟ್ಟರು.
ಪಟೇಲರ ಜೀವನ ನಮಗೆ ಆದರ್ಶವಾಗಿದೆ. ಅವರ ಧೈರ್ಯ, ದೇಶಪ್ರೇಮ ನಮಗೆ ಮಾದರಿಯಾಗಿದೆ. ಅವರು ತಮ್ಮ ಜೀವನದುದ್ದಕ್ಕೂ ದೇಶಕ್ಕಾಗಿ ತ್ಯಾಗ, ಬಲಿದಾನಗಳನ್ನು ಮಾಡಿದ್ದರು. ದೇಶದ ಇತಿಹಾಸದಲ್ಲಿ ಅವರು ಎಂದಿಗೂ ಅಮರ. ಇತಿಹಾಸವನ್ನು ಅಳಿಸಲು ಯಾರಿಂದಿಲೂ ಸಾಧ್ಯವಿಲ್ಲ ಎಂದು ತಿಳಿಸಿದರು.
ಮಹಾತ್ಮಾ ಗಾಂಧೀಜಿ ಹಾಗೂ ಸರ್ದಾರ್ ವಲ್ಲಭಬಾಯ್ ಪಟೇಲರ ಜೋಡಿ ಅದ್ಭುತವಾಗಿತ್ತು. ದೇಶದ ರೈತರ ಅಭಿವೃದ್ಧಿಗಾಗಿ ಇಬ್ಬರು ಮಹತ್ಮಾರು ಶ್ರಮಿಸಿದ್ದಾರೆ. ದೇಶಕ್ಕಾಗಿ ಅವರ ಕೊಡುಗೆ ಅಪಾರ ಎಂದು ಸ್ಮರಿಸಿದರು.
ಪಟೇಲರ 139ನೇ ಜನ್ಮದಿನಾಚರಣೆ ಏಕತಾ ದಿನವನ್ನಾಗಿ ಆಚರಿಸಲಾಗುತ್ತಿದ್ದು, ದೇಶದ ಏಕತೆಗಾಗಿ ನವದೆಹಲಿಯ ಇಂಡಿಯಾಗೇಟ್ನಿಂದ ಮೋದಿ ಏಕತಾ ಓಟಕ್ಕೆ ಚಾಲನೆ ನೀಡಿದರು. ಈ ವೇಳೆ ಜನತೆಗೆ ಮೋದಿ ಐಕ್ಯತೆಯ ಪ್ರತಿಜ್ನಾವಿಧಿ ಬೋಧಿಸಿದರು.
ಏಕ್ ಭಾರತ ಶ್ರೇಷ್ಠ ಭಾರತ ಎಂಬ ಧ್ಯೇಯವಾಕ್ಯದೊಂದಿಗೆ ಇಂಡಿಯಾಗೇಟ್ ನಿಂದ ಆರಂಭವಾದ ಏಕತಾ ಓಟ ವಿಜಯ್ ಚೌಕ್ ವರೆಗೆ ಸುಮಾರು 1.4 ಕಿ.ಮೀ ವರೆಗೆ ಸಾಗಿತು.