ವಾರಾಣಸಿ : ಪ್ರಧಾನಿ ನರೇಂದ್ರ ಮೋದಿ ಸಂಸದರ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ವಾರಾಣಸಿಯ ಜಯಪುರ ಎಂಬ ಗ್ರಾಮ ದತ್ತು ತೆಗೆದುಕೊಂಡಿದ್ದಾರೆ.
ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಈ ಗ್ರಾಮದ ಬಗ್ಗೆ ಹಲವಾರು ಕಥೆಗಳನ್ನು ಕೇಳಿದ್ದೇನೆ ಎಂದು ಹೇಳಿದ್ದರು. ಈ ಗ್ರಾಮದ ಬಗ್ಗೆ ಹಲವು ಐತಿಹಾಸಿಕ, ರೋಚಕ ಕಥೆ ಇದೆ. ಅದನ್ನು ತೆರೆದಿಡುವ ಸಣ್ಣ ಪ್ರಯತ್ನ ಇಲ್ಲಿದೆ.
ಪ್ರಧಾನಿ ದತ್ತು ಪಡೆದಿರುವ ಜಯಪುರ, ಮುಘಲ್ ದೊರೆ ಔರಂಗಜೇಬ್ ನ ದಾಳಿಯನ್ನು ಮೆಟ್ಟಿನಿಂತಿದ್ದ ಗ್ರಾಮವಾಗಿತ್ತು. ಬರೊಬ್ಬರಿ 400 ವರ್ಷಗಳ ಹಿಂದೆ ಜಯಪುರ ಗ್ರಾಮಸ್ಥರು, ಮುಘಲ್ ದೊರೆ ಔರಂಗಜೇಬ್ ನ ದಾಳಿಯನ್ನು ಮೆಟ್ಟಿ ನಿಂತಿದ್ದರು. ಇತಿಹಾಸದ ದಾಖಲೆಗಳ ಪ್ರಕಾರ, ಹಿಂದೂ ದೇವಾಲಗಳನ್ನು ನಾಶ ಮಾಡುತ್ತಿದ್ದ ಔರಂಗಜೇಬ್, ಜಯಪುರದಲ್ಲಿ ಇಂದಿಗೂ ಅಸ್ಥಿತ್ವದಲ್ಲಿರುವ ಹನುಮಂತನ ದೇವಾಲಯವನ್ನು ನಾಶ ಮಾಡಲು ದಾಳಿ ನಡೆಸಿದ್ದ ಆದರೆ ಗ್ರಾಮಸ್ಥರು ದಾಳಿಯನ್ನು ಸಮರ್ಥವಾಗಿ ಎದುರಿಸಿದ್ದರು ಎಂದು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಪ್ರೊ. ಕೆ.ಕೆ.ಮಿಶ್ರಾ ಹೇಳಿದ್ದಾರೆ.
ಔರಂಗಜೇಬ್ ದಾಳಿಯಿಂದ ಗ್ರಾಮಸ್ಥರು ಉಳಿಸಿಕೊಂಡಿರುವ ದೇವಸ್ಥಾನ ಇಂದು ಕಾಲೇ ಹನುಮಾನ್ ಕಾ ಮಂದಿರ್(ಹನುಮಂತನ ವಿಗ್ರಹ ಕಪ್ಪು ಬಣ್ಣದಲ್ಲಿರುವುದರಿಂದ ಈ ಹೆಸರು ಬಂದಿದೆ) ಎಂದೇ ಪ್ರಸಿದ್ಧವಾಗಿದೆ. ಅಲ್ಲದೇ 2003ರಲ್ಲಿ ಜಮ್ಮು-ಕಾಶ್ಮೀರದಲ್ಲಿ ಸೇನಾ ಪಡೆ-ಉಗ್ರರು ನಡುವೆ ನಡೆದ ಗುಂಡಿನ ಕಾಳಗದಲ್ಲಿ ಈ ಗ್ರಾಮದ ಯೋಧ ವೀರಮರಣವನ್ನಪ್ಪಿರುವುದು ಜಯಪುರದ ಹೆಗ್ಗಳಿಗೆ.
3500 ಜನಸಂಖ್ಯೆ ಹೊಂದಿರುವ ಈ ಗ್ರಾಮ, ರಾಜಕೀಯವಾಗಿಯೂ ಮಹತ್ವ ಪಡೆದುಕೊಂಡಿದೆ. ಪಟೇಲ್ ಸಮುದಾಯದವರೇ ಇಲ್ಲಿ ನಿರ್ಣಾಯಕರು ಎಂದು ಹೇಳಲಾಗಿದೆ. ಕೃಷಿ ಉತ್ಪನ್ನಗಳಲ್ಲೂ ಗಮನ ಸೆಳೆಯುವ ಜಯಪುರ ಗ್ರಾಮ ವಿಭಿನ್ನ ತಳಿಯ ಕಬ್ಬು ಬೆಳೆಗೆ ಖ್ಯಾತಿ ಪಡೆದಿದೆ. ಜೈಪುರಿಯಾ ಕಬ್ಬು ಎಂದೇ ದೇಶಾದ್ಯಂತ ಪ್ರಸಿದ್ಧಿಯಾಗಿರುವ ಈ ಬೆಳೆ ಜಯಪುರದಲ್ಲಿ ವರ್ಷದ ಅಷ್ಟೂ ತಿಂಗಳಲ್ಲಿ ಬೆಳೆಯಬಹುದಾದ ಬೆಳೆಯಾಗಿರುವುದು ವಿಶೇಷ.